ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ನೂರಾರು ಪ್ರಯಾಣಿಕರು ಇದ್ದ ಏರ್ ಇಂಡಿಯಾ ವಿಮಾನ ಕೂದಲೆಳೆ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದೆ.
ಪ್ರತಿಕೂಲ ಹವಾಮಾನದ ನಡುವೆ ತಿರುವನಂತಪುರಂನಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಶಂಕಿತ ತಾಂತ್ರಿಕ ದೋಷ ಕಂಡುಬಂದ ನಂತರ ಚೆನ್ನೈಗೆ ತಿರುಗಿಸಲಾಯಿತು.
ಏರ್ ಇಂಡಿಯಾ AI2455 ವಿಮಾನ ಚೆನ್ನೈನಲ್ಲಿ ಸುರಕ್ಷಿತವಾಗಿ ಇಳಿದಿದ್ದು, ವಿಮಾನವನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.
ಘಟನೆಯನ್ನು ವಿಮಾನದಲ್ಲಿದ್ದ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು “ದುಃಖಕರ ಪ್ರಯಾಣ” ಎಂದು ತಿಳಿಸಿದ್ದಾರೆ.ತಿರುವನಂತಪುರದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನ AI 2455 ಇಂದು ದುರಂತದ ಹತ್ತಿರಕ್ಕೆ ಬಂದಿತ್ತು. ನಾನು, ಹಲವಾರು ಸಂಸದರು ಮತ್ತು ನೂರಾರು ಪ್ರಯಾಣಿಕರು ಇದ್ದೆವು. ಟೇಕ್ ಆಫ್ ಆದ ಸುಮಾರು ಒಂದು ಗಂಟೆಯ ನಂತರ ಕ್ಯಾಪ್ಟನ್ ವಿಮಾನ ಸಿಗ್ನಲ್ ದೋಷವನ್ನು ಘೋಷಿಸಿದರು ಮತ್ತು ಚೆನ್ನೈಗೆ ವಿಮಾನ ತಿರುಗಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಾವು ಇಳಿಯಲು ಅನುಮತಿಗಾಗಿ ಕಾಯುತ್ತಾ ವಿಮಾನ ನಿಲ್ದಾಣವನ್ನು ಸುತ್ತುತ್ತಿದ್ದೆವು.
ವಿಮಾನವನ್ನು ಪೈಲಟ್ ಚೆನ್ನೈ ಕಡೆಗೆ ತಿರುಗಿಸಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಇಳಿಯುತ್ತಿದ್ದಾಗ ಏರ್ಪೋರ್ಟ್ ನ ಅದೇ ರನ್ ವೇನಲ್ಲಿ ಮತ್ತೊಂದು ವಿಮಾನ ಇತ್ತು. ಇದರಿಂದ ಅತ್ಯಂತ ಕ್ಷೀಪ್ರವಾಗಿ ಪೈಲಟ್ ವಿಮಾನವನ್ನು ಮೇಲಕ್ಕೆ ಎತ್ತಿದ್ದಾರೆ. ಪೈಲೆಟ್ ಸಮಯ ಪ್ರಜ್ಞೆಯಿಂದಾಗಿ ಎಲ್ಲರ ಜೀವ ಉಳಿಸಿದೆ. ಮತ್ತೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಕ್ಯಾಪ್ಟನ್ ಕೌಶಲ್ಯ ಮತ್ತು ಅದೃಷ್ಟದಿಂದ ನಾವು ಪಾರಾಗಿದ್ದೇವೆ. ಪ್ರಯಾಣಿಕರ ಸುರಕ್ಷತೆಯು ಅದೃಷ್ಟವನ್ನು ಅವಲಂಬಿಸಲು ಸಾಧ್ಯವಿಲ್ಲ. ಈ ಘಟನೆಯನ್ನು ತುರ್ತಾಗಿ ತನಿಖೆ ಮಾಡಿ, ಹೊಣೆಗಾರಿಕೆಯನ್ನು ಸರಿಪಡಿಸಿ, ಇಂತಹ ಲೋಪಗಳು ಮತ್ತೆಂದೂ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ವೇಣುಗೋಪಾಲ್ ಒತ್ತಾಯಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


