ಮಂಡ್ಯ/ಬೆಂಗಳೂರು: ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು, ಆ ನಂತರ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿ ಅಗಲಿದ ಚೇತನಕ್ಕೆ ನಮನ ಸಲ್ಲಿಸಿದ್ದಾರೆ.
ನಮ್ಮೆಲ್ಲರನ್ನೂ ಬಿಟ್ಟು ಅಗಲಿದ ಕರ್ನಾಟಕದ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು ಆಗಿದ್ದ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಮದ್ದೂರಿನ ಸೋಮನಹಳ್ಳಿ ಗ್ರಾಮಕ್ಕೆ ತೆರಳಿ ಅಂತಿಮ ನಮನ ಸಮರ್ಪಣೆ ಮಾಡಿದೆ.
ಸರಳತೆ, ಸಜ್ಜನಿಕೆ, ವಿನಯದ ಮೇರು ಶಿಖರವಾಗಿದ್ದ ಅವರು ವೈಯಕ್ತಿಕವಾಗಿ ನನಗೆ ಬಹಳ ಆದರಣೀಯರು. ನಾನು ಚುನಾವಣೆಯಲ್ಲಿ ಸೋತಾಗ ಧೈರ್ಯ, ಸಾಂತ್ವನ ಹೇಳಿದ್ದರು. ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ತಾವು ಕೂಡ ರಾಜಕೀಯ ಸವಾಲುಗಳನ್ನು ಎದುರಿಸಿದ್ದ ಬಗ್ಗೆಯೂ ನನಗೆ ತಿಳಿಹೇಳಿ ಚೈತನ್ಯ ಮೂಡಿಸಿದ್ದರು.
2019ರ ಚುನಾವಣೆಯಲ್ಲಿ ನಾನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದೆ. ಫಲಿತಾಂಶ ಹೊರಬಿದ್ದ ನಂತರ ನಾನು ಮುಕ್ತ ಮನಸ್ಸಿನಿಂದ ಟ್ವೀಟ್ ಒಂದನ್ನು ಪೋಸ್ಟ್ ಮಾಡಿ, ಅದರಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಿದ್ದೆ. ಆ ಟ್ವೀಟ್ ಗಮನಿಸಿದ್ದ ಶ್ರೀ ಎಸ್.ಎಂ.ಕೃಷ್ಣ ಅವರು, ಅದನ್ನು ರೀ ಟ್ವೀಟ್ ಮಾಡಿದ್ದರು ಹಾಗೂ ಆ ನಂತರ ನನಗೆ ದೂರವಾಣಿ ಕರೆ ಮಾಡಿ, “ನಿನ್ನ ಟ್ವೀಟ್ ನೋಡಿದೆ ನಿಖಿಲ್. ಬಹಳ ಚೆನ್ನಾಗಿದೆ, ಹೃದಯಸ್ಪರ್ಶಿಯಾಗಿ ಬರೆದಿರುವೆ. ಸೋತಾಗ ಈ ರೀತಿ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ತುಂಬಾ ಅಪರೂಪ. ಸೋಲನ್ನು ಒಪ್ಪಿಕೊಳ್ಳುವ ರೀತಿ, ಗೆದ್ದವರನ್ನು ಅಭಿನಂದಿಸುವ ಬಗೆ ಎರಡೂ ಬಹಳ ಮುಖ್ಯ. ನಿನ್ನ ನಡವಳಿಕೆ ಇಷ್ಟವಾಯಿತು. ಇದು ನಿನ್ನ ಉತ್ತಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ. ಧೈರ್ಯವಾಗಿ ಮುನ್ನುಗ್ಗು.. ದೇವರು ಒಳ್ಳೆಯದು ಮಾಡುತ್ತಾನೆ..” ಎಂದು ಹಿತವಚನ ಹೇಳಿದ್ದರು. ಎರಡು-ಮೂರು ನಿಮಿಷಗಳ ಅವರ ಧೈರ್ಯದ ಮಾತುಗಳು ಆವತ್ತು ನನ್ನನ್ನು ಮತ್ತಷ್ಟು ಸದೃಢಗೊಳಿಸಿದ್ದವು. ಪಕ್ಷ ರಾಜಕಾರಣ ಮೀರಿ ಇಂಥ ವ್ಯಕ್ತಿತ್ವ ಮೆರೆಯುವುದು ಎಂದರೆ ಇವತ್ತಿನ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ. ಉದಾರ ವ್ಯಕ್ತಿತ್ವ, ಮಾನವೀಯ ಸಂಬಂಧಗಳಿಗೆ ಶ್ರೀ ಕೃಷ್ಣ ಅವರು ಆದರ್ಶಪ್ರಾಯರಾಗಿದ್ದರು. ಇವತ್ತು ಅವರ ಭೌತಿಕ ಕಾಯದ ಮುಂದೆ ನಿಂತು ಶಿರಬಾಗಿ ನಮಿಸುವಾಗ ನನ್ನಲ್ಲಿ ಆ ಸ್ಮರಣೆಗಳೆಲ್ಲವೂ ಹಾದು ಹೋದವು.
ಐಟಿ-ಬಿಟಿ ಮೂಲಕ ಬೆಂಗಳೂರು ಮಹಾನಗರಕ್ಕೆ ಬ್ರ್ಯಾಂಡ್ ಇಮೇಜ್ ತಂದುಕೊಟ್ಟವರು ಶ್ರೀ ಎಸ್.ಎಂ.ಕೃಷ್ಣ ಅವರು. ಅನೇಕ ಕಂಪನಿಗಳನ್ನು ಕರೆತಂದು ಉದ್ಯಾನನಗರಿಯನ್ನು ಸಿಲಿಕಾನ್ ವ್ಯಾಲಿ ಮಾಡಿದ್ದು ಕೂಡ ಅವರೇ. ರಾಜ್ಯದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ ಪ್ರಾತಃಸ್ಮರಣೀಯರಲ್ಲಿ ಅವರು ಖಂಡಿತಾ ಒಬ್ಬರು. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಅವರು ಬಿಟ್ಟುಹೋದ ಕೊಡುಗೆಗಳು ಅಜರಾಮರ. ಅವು ಎಂದೆಂದೂ ನಮ್ಮೊಂದಿಗೆ ಇರುತ್ತೇವೆ.
ಶ್ರೀ ಎಸ್.ಎಂ.ಕೃಷ್ಣ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


