Thursday, March 19, 2026
spot_img
More
    spot_img
    HomeTop Storyʼಇಂಡಿಯಾʼ ಮೈತ್ರಿಕೂಟದಿಂದ ಪ್ರಾದೇಶಿಕ ಪಕ್ಷಗಳು ದೂರ; ಕಾಂಗ್ರೆಸ್‌ನಲ್ಲಿ ಶುರು ತಳಮಳ

    ʼಇಂಡಿಯಾʼ ಮೈತ್ರಿಕೂಟದಿಂದ ಪ್ರಾದೇಶಿಕ ಪಕ್ಷಗಳು ದೂರ; ಕಾಂಗ್ರೆಸ್‌ನಲ್ಲಿ ಶುರು ತಳಮಳ

    ನವದೆಹಲಿ: ಲೋಕಸಭಾ ಚುನಾವಣೆ ಕಳೆಯುತ್ತಿದ್ದಂತೆಯೇ ಇಂಡಿಯಾ ಮೈತ್ರಿಕೂಟದ ಒಂದೊಂದೇ ಪ್ರಾದೇಶಿಕ ಪಕ್ಷಗಳು ಮೈತ್ರಿ ಕಳಚಿಕೊಳ್ಳಲಾರಂಭಿಸಿದ್ದು, ಇಂಡಿಯಾದೊಳಗೆ ತಳಮಳ ಶುರುವಾಗಿದೆ.

    ಪ್ರಾದೇಶಿಕ ಪಕ್ಷಗಳು ತಮ್ಮ ಬುಡಗಟ್ಟಿ ಮಾಡಿಕೊಳ್ಳುವ ತವಕದಲ್ಲಿವೆ. ಮುಂದೆ ಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜತೆಗೆ ಹೋದರೆ ತಮಗೆ ಉಳಿಗಾಲವಿಲ್ಲ ಎಂಬ ನಿರ್ಧಾರಕ್ಕೆ ಬಂದಿವೆ. ಹೀಗಾಗಿ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆಗೆ ಹೋಗಲು ಹಿಂದೇಟು ಹಾಕುತ್ತಿವೆ. ಸದ್ಯ ಇದು ಇಂಡಿಯಾ ಒಕ್ಕೂಟದ ನಾಯಕರ ಆತಂಕಕ್ಕೆ ಕಾರಣವಾಗಿದೆ.

    ಜೆಡಿಯುನ ನಿತೀಶ್ ಕುಮಾರ್ ಹಾಗೂ ಟಿಡಿಪಿಯ ಚಂದ್ರಬಾಬುನಾಯ್ಡು ಹೇಳಿದಂತೆ ಕೇಳಿಕೊಂಡು ಆಡಳಿತ ನಡೆಸಬೇಕು, ಎನ್ ಡಿಎ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯಲ್ಲ ಎಂದೆಲ್ಲ ಬಡಬಡಾಯಿಸಿದ ಇಂಡಿಯಾ ಒಕ್ಕೂಟದ ನಾಯಕರು ಇದೀಗ ನಮ್ಮೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ದುರ್ಬಲವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಪಕ್ಷಗಳಿಂದ ರಚನೆಯಾಗಿರುವ ಇಂಡಿಯಾ ಒಕ್ಕೂಟದಲ್ಲಿ ಪ್ರಾದೇಶಿಕ ಪಕ್ಷಗಳ ಸಂಖ್ಯೆ ಜಾಸ್ತಿಯಿದೆ. ಅದರಲ್ಲೂ ಎಎಪಿ, ಟಿಎಂಸಿ ಮತ್ತು ಎಸ್ ಪಿ ಪಕ್ಷಗಳು ಪ್ರಾಬಲ್ಯ ಹೊಂದಿವೆ. ಎಎಪಿ ದೆಹಲಿಯಿಂದ ಆಚೆಗೂ ವಿಸ್ತರಿಸಿದ್ದು, ಈಗಾಗಲೇ ದೆಹಲಿ ಮತ್ತು ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿದೆ. ಹೀಗಾಗಿ ಅದು ತನ್ನದೇ ಪ್ರಾಬಲ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನೊಂದಿಗೆ ಹೋರಾಡಿಕೊಂಡೇ ಅಧಿಕಾರ ಪಡೆದುಕೊಂಡಿದೆ. ಮುಂದೆಯೂ ಅದನ್ನೇ ಮಾಡಬೇಕಿದೆ.

    ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಚುನಾವಣೆಗೆ ಹೋದರೆ ಸೀಟು ಹಂಚಿಕೆ ವಿಚಾರದಲ್ಲಿ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಕೆಲವು ಕ್ಷೇತ್ರಗಳಲ್ಲಿ ಮೈತ್ರಿಯವರೇ ಎದುರಾಳಿಯಾಗಿರುವುದರಿಂದ ಅಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ನಡೆಸುವುದು ಕಷ್ಟವಾಗಲಿದೆ. ಒಂದು ವೇಳೆ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿದ್ದರೆ ಮೈತ್ರಿ ಮುಂದುವರೆಸಲು ಪ್ರಾದೇಶಿಕ ಪಕ್ಷಗಳ ನಾಯಕರು ಮುಂದಾಗುತ್ತಿದ್ದರೇನೋ? ಆದರೆ ಮಹಾರಾಷ್ಟ್ರದ ಮಹಾಸೋಲನ್ನು ನೋಡಿದ ನಂತರ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಭಯಪಡುವಂತಾಗಿದೆ.

    ಇಂಡಿಯಾ ಒಕ್ಕೂಟದ ನಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದೆ ದೇಶದಲ್ಲಿ ಮೂರಂಕಿಯನ್ನು ತಲುಪದೆ ಹೋದರೂ ಗಡಿಗೆ ಬಂದು ನಿಂತಿದೆ. ಸದ್ಯಕ್ಕೆ ಬಿಜೆಪಿ ಲೋಕಾ ಗೆಲುವಿನ ಸ್ಥಾನ ಕುಸಿದಿದ್ದರಿಂದ ಅದಕ್ಕೆ ಕಾರಣ ನಾವು ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಅದು ಸಾಧನೆಯಂತೆ ಗೋಚರಿಸುತ್ತಿದೆ. ಬಹುಶಃ ಲೋಕಸಭಾ ಚುನಾವಣೆ ನಂತರವೂ ವಿಧಾನಸಭಾ ಚುನಾವಣೆಗಳಲ್ಲಿ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರೆ ಮುಂದೆ ಇಂಡಿಯಾ ಒಕ್ಕೂಟಕ್ಕೆ ಭವಿಷ್ಯವಿದೆ ಎಂದು ಒಪ್ಪಿಕೊಳ್ಳಬಹುದಿತ್ತು. ಆದರೆ ಈಗಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಅದು ಕಾಣುತ್ತಿಲ್ಲ.

    ಬಹಳಷ್ಟು ಸಲ ಚುನಾವಣೆ ಸಂದರ್ಭದಲ್ಲಿ ಮತ್ತು ಚುನಾವಣೆ ನಂತರ ಅಧಿಕಾರಕ್ಕಾಗಿ ಆಗುವ ಮೈತ್ರಿಗಳು ಗಟ್ಟಿಯಾಗಿ ನಿಂತ ನಿದರ್ಶನ ಕಡಿಮೆಯೇ.. ಉದಾಹರಣೆಗೆ ೨೦೧೮ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆಯಿದ್ದಾಗ ಹಾವುಮುಂಗುಸಿಯಂತಿದ್ದ ಕಾಂಗ್ರೆಸ್ ಜೆಡಿಎಸ್ ದಿನಬೆಳಗಾಗುವುದರೊಳಗೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿದ್ದರಾದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

    ಮೋದಿಯನ್ನು ಸೋಲಿಸಬೇಕೆನ್ನುವ ಕಾರಣಕ್ಕೆ ಒಕ್ಕೂಟ ಸೃಷ್ಟಿಯಾಗಿತ್ತು. ಎನ್ಡಿಎಗೆ ಟಕ್ಕರ್ ಕೊಡದ ಐಎನ್ಡಿಐಎ ಮೇಲ್ನೋಟಕ್ಕೆ ಲೋಕಸಭಾ ಚುನಾವಣೆ ವೇಳೆ ಇಂಡಿಯಾ ಒಕ್ಕೂಟ ಹೋರಾಟ ಮಾಡಿತ್ತಾದರೂ ಒಳಗೆ ನಾಯಕರಲ್ಲಿ ಒಗ್ಗಟ್ಟು ಕಾಣಿಸಿರಲಿಲ್ಲ. ಒಂದು ವೇಳೆ ಏನೆಲ್ಲ ತಪ್ಪುಗಳಾದವೋ ಅದೆಲ್ಲವನ್ನು ಸರಿಪಡಿಸಿಕೊಂಡು ಮುನ್ನಡೆದಿದ್ದರೆ, ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಗಟ್ಟಿಯಾಗಿ ಎನ್ ಡಿಎಗೆ ಟಕ್ಕರ್ ಕೊಡಬಹುದಿತ್ತೇನೋ? ಆದರೆ ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿ ಇಂಡಿಯಾ ಒಕ್ಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಹೋದರೆ ಅಲ್ಲಿಗೆ ಇಂಡಿಯಾ ಒಕ್ಕೂಟದ ಕಥೆ ಮುಗಿದಂತೆಯೇ.

    ಈಗಾಗಲೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟದಲ್ಲಿದ್ದರೂ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಮಾತ್ರ ಅವರು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಒಟ್ಟಾಗಿ ಹೋಗಲು ತಯಾರಿಲ್ಲ. ಏಕೆಂದರೆ ಅವರು ಈಗಾಗಲೇ ಅಧಿಕಾರದಲ್ಲಿದ್ದಾರೆ. ಹೀಗಾಗಿ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜತೆಗೆ ಚುನಾವಣೆಗೆ ಹೋದರೆ ಅದರಿಂದ ಲಾಭವಂತು ಆಗಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ.

    ಸದ್ಯಕ್ಕೆ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವುದು ದೆಹಲಿಯಲ್ಲಿ. ಇಲ್ಲಿ ಕಾಂಗ್ರೆಸ್ ನ್ನು ಗುಡಿಸಿ ಅಧಿಕಾರ ಹಿಡಿದು ಆಡಳಿತ ನಡೆಸುತ್ತಿರುವುದು ಎಎಪಿ. ಕಾಂಗ್ರೆಸ್ ನ್ನು ಸೋಲಿಸಿ ಅಧಿಕಾರಕ್ಕೆ ಬಂದಿರುವ ಎಎಪಿ ಮತ್ತೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ಎಎಪಿ ಲೆಕ್ಕಾಚಾರವಾಗಿದೆ. ಹೀಗಾಗಿಯೇ ಅದು ಮೈತ್ರಿಗೆ ಸೊಪ್ಪು ಹಾಕದೆ ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ. ಎಎಪಿ ಮತ್ತು ಟಿಎಂಸಿ ಇಂಡಿಯಾ ಒಕ್ಕೂಟದಿಂದ ದೂರ ಸರಿದರೆ ಕಾಂಗ್ರೆಸ್ ಗೆ ಮುಖಭಂಗವಾಗುತ್ತದೆ. ಮತ್ತೆ ಹಿಂದಿನ ಯುಪಿಎ ಪರಿಸ್ಥಿತಿಯೇ ಬರಲಿದೆ.

    ದೆಹಲಿ ಚುನಾವಣೆಯತ್ತ ಇಡೀ ದೇಶ ಕಣ್ಣಿಟ್ಟಿದೆ. ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಎಎಪಿ ಪಣತೊಟ್ಟಿದೆ. ಹೀಗಾಗಿಯೇ ಅದು ಜರೂರಾಗಿಯೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಜತೆಗೆ ಕೈಜೋಡಿಸಲ್ಲ ಎಂಬ ಸಂದೇಶ ನೀಡಿದೆ. ಈ ಸಂಬಂಧ ಸ್ಪಷ್ಟನೆಯನ್ನು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ಅಲ್ಲಿಗೆ ಇಂಡಿಯಾ ಮೈತ್ರಿಗೆ ದೊಡ್ಡದೊಂದು ಹೊಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಇಂಡಿಯಾ ಪರಿಸ್ಥಿತಿ ಹೇಗಿರಬಹುದು? ಎಂಬುದನ್ನು ಕಾದುನೋಡಬೇಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಗರ್ಭಧಾರಣೆ ಘೋಷಿಸಿದ ತಿಂಗಳಲ್ಲೇ ಯೂಟ್ಯೂಬರ್ ಪತ್ನಿ ಹತ್ಯೆ—ಪತಿಯ ಭೀಕರ ಕೃತ್ಯ!

    ತೆಲಂಗಾಣದಲ್ಲಿ ನಡೆದ ಈ ದಾರುಣ ಘಟನೆ ದೇಶದಾದ್ಯಂತ ಆತಂಕ ಮೂಡಿಸಿದೆ. “ಯೂಟ್ಯೂಬರ್ ಪತ್ನಿ ಹತ್ಯೆ” ಪ್ರಕರಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನ್ನ ಗರ್ಭಧಾರಣೆಯನ್ನು ಸ್ವತಃ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ...

    ಐಪಿಎಲ್ 2026: ಇಶಾನ್ ಕಿಶನ್ ಕೈಗೆ SRH ನಾಯಕತ್ವ—ಅಭಿಷೇಕ್ ಶರ್ಮಾಗೆ ಹೊಸ ಜವಾಬ್ದಾರಿ!

    ಐಪಿಎಲ್ 2026 ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ! “ಐಪಿಎಲ್ 2026 ಇಶಾನ್ ಕಿಶನ್ SRH ನಾಯಕ” ಎಂಬ ಸುದ್ದಿ ಈಗ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು,...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading