ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಒಂದೆಡೆ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದ ಹಿಂದೆ ಬಿದ್ದಿದ್ದರೆ, ಇತ್ತ ಯುಟ್ಯೂಬರ್ಗಳು ಎಸ್ಐಟಿ ವರದಿ ಪ್ರಸಾರ ಮಾಡುವ ಕುರಿತಾಗಿ ಪರ ಹಾಗೂ ವಿರೋಧ ಆಪಾದನೆಗಳಲ್ಲಿ ಮುಳುಗಿದ್ದಾರೆ.
ಗೋಲ್ಡನ್ ಕನ್ನಡಿಗ ಎಂಬ ಯುಟ್ಯೂಬ್ ಚಾನೆಲ್ ಹೊಂದಿರುವ ಸುಮಂತ್ ಚಂದನ್ ಗೌಡ ವಿರುದ್ಧ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲು ಹಣ ಪಡೆದಿದ್ದಾರೆಂದು ಗಂಭೀರ ಆರೋಪ ಮಾಡಿದ ಬಳಿಕ ಭಾರೀ ವಿವಾದವೇ ಹುಟ್ಟಿಕೊಂಡಿದ್ದು, ಈ ಮಧ್ಯೆ ಚೇತನ್ ಎಂಬ ಯುವಕ ಸುಮಂತ್ನದ್ದು ಎಂದು ಆಡಿಯೊಗಳನ್ನು ಲೀಕ್ ಮಾಡಿ ಇಡೀ ಚಿತ್ರಣವನ್ನೇ ಬದಲಿಸಿಬಿಟ್ಟಿದ್ದಾನೆ.
ಸುಮಂತ್ ಈ ಆಡಿಯೊದಲ್ಲಿ ಯುಟ್ಯೂಬರ್ಗಳ ಮೇಲೆ ಹಲ್ಲೆ ಪೂರ್ವ ನಿಯೋಜಿತ, 13ನೇ ಸ್ಥಳ ಉತ್ಖನನವಾದ ಮೇಲೆ ಜನರಿಂದ ಹಲ್ಲೆ ನಡೆಸಿ ತನಿಖೆಯನ್ನು ನಿಲ್ಲಿಸುವ ಯೋಜನೆಯಿತ್ತು ಎಂದು ಹೇಳಿಕೊಂಡಿದ್ದು, ಸಮೀರ್ ಇದ್ದಿದ್ದರೆ ಸಾಯಿಸಿಬಿಡುತ್ತಿದ್ದರು ಎಂದೂ ಸಹ ಹೇಳಿದ್ದಾನೆ.
ಹೀಗೆ ಮಾತನಾಡಿರುವ ಸುಮಂತ್ ಬಳಿಕ ತನ್ನ ಮುಂದಿನ ಯೋಜನೆಯೇನು ಎಂಬುದನ್ನು ಸಹ ಹಂಚಿಕೊಂಡಿದ್ದಾನೆ. ತಾನು ಪುನೀತ್ ಕೆರೆಹಳ್ಳಿ ಜತೆ ಇದ್ದು, ಲವ್ ಜಿಹಾದ್ ವಿಡಿಯೊ ಯೋಜನೆ ನಡೆಯುತ್ತಿದೆ ಎಂದಿದ್ದಾನೆ. ಈ ಬಾರಿ ನೇಹಾ ಹೆಸರನ್ನು ಬಳಸುವುದಿಲ್ಲ, ಇದು ಬೇರೆಯದ್ದೇ ಕಥೆ, ಅದನ್ನು ಕೇಳಿ ನನಗೇ ಕಣ್ಣೀರು ಬಂತು ಎಂದಿರುವ ಸುಮಂತ್ ಪುನೀತ್ ಕೆರೆಹಳ್ಳಿ ಅವರೇ ಇದಕ್ಕೆ ಹಣ ಹೂಡಲಿದ್ದಾರೆ ಎಂದಿದ್ದಾನೆ. ಅಲ್ಲದೇ ಸಮೀರ್ ರೀತಿ ತಾನು ಎಡಬಿಡಂಗಿ ಕೆಲಸ ಮಾಡಿಕೊಳ್ಳುವುದಿಲ್ಲ, ತನ್ನ ಬಳಿ ತಕ್ಕ ಸಾಕ್ಷಿಗಳಿವೆ ಎಂದೂ ಸಹ ಸುಮಂತ್ ಹೇಳಿದ್ದಾನೆ.
ಇನ್ನು ವಿಡಿಯೊ ಬಿಡುಗಡೆಯಾದ ಒಂದು ಗಂಟೆಯಲ್ಲೇ ಚಕ್ರವರ್ತಿ ಸೂಲಿಬೆಲೆಯಂತಹ ದೊಡ್ಡ ದೊಡ್ಡ ಹಿಂದೂಪರ ಹೋರಾಟಗಾರರು ಇದರ ಕುರಿತು ಪೋಸ್ಟ್ ಹಂಚಿಕೊಳ್ಳಲಿದ್ದು, 500 ಟ್ರೋಲ್ ಪೇಜ್ಗಳೂ ಸಹ ಪೋಸ್ಟ್ ಮಾಡಲಿವೆ, ಹೀಗಾಗಿ ವಿಡಿಯೊ ದೊಡ್ಡ ಮಟ್ಟದಲ್ಲಿ ವೈರಲ್ ಆಗಲಿದೆ ಎಂದಿದ್ದಾನೆ. ಇನ್ನು ಇದಕ್ಕೆ ಎಐ ಬಳಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸ್ಕ್ರಿಪ್ಟ್ ಕೆಲಸ ಸಹ ನಡೆಯುತ್ತಿದೆ ಎಂದಿದ್ದಾನೆ.
ಬಳಿಕ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ತನ್ನನ್ನು ಬಂಧಿಸಲಿದ್ದಾರೆ, ಆಗ ಪುನೀತ್ ಕೆರೆಹಳ್ಳಿ ಅವರ ವಕೀಲರು ತನಗೆ ಸಹಾಯ ಮಾಡಲಿದ್ದಾರೆ, ಮೊದಲ ವಿಚಾರಣೆಗೂ ಹಾಗೂ ಎರಡನೇ ವಿಚಾರಣೆಗೂ 15 ದಿನಗಳ ಅಂತರವಿರಲಿದ್ದು, ಅಷ್ಟು ದಿನಗಳಲ್ಲಿ ವಿಡಿಯೊ ವೈರಲ್ ಆಗಲಿದೆ ಎಂದು ಸಹ ಸುಮಂತ್ ಮಾತನಾಡಿದ್ದಾನೆ.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


