ಹೊಸದಿಲ್ಲಿ: ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆ -2025ಕ್ಕೆ ಸಾಂವಿಧಾನಿಕ ಸಿಂಧುತ್ವ ನೀಡಿರುವುದಕ್ಕೆ ಸಂಪೂರ್ಣವಾಗಿ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಆದರೆ, ಕೆಲ ಅಂಶಗಳ ಬದಲಾವಣೆಗೆ ಸೂಚಿಸಲಾಗಿದೆ. ಸಂಪೂರ್ಣ ಕಾನೂನಿಗೆ ತಡೆ ನೀಡಲು ಯಾವುದೇ ಆಧಾರವಿಲ್ಲ. ಕೆಲವು ವಿಭಾಗಗಳ ಬಗ್ಗೆ ವಿವಾದವಿದೆ. ನ್ಯಾಯಾಲಯವು ಇದರ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಮರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕಾಯ್ದಿರಿಸಿದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ಎ.ಜಿ.ಮಸೀಹ್ ಅವರಿದ್ದ ದ್ವಿಸದಸ್ಯ ಪೀಠವು, ಕಳೆದ ಮೇ.22ರಂದು ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿತು.
ಯಾವುದೇ ಒಬ್ಬ ವ್ಯಕ್ತಿ ವಕ್ಫ್ ಮಂಡಳಿಯ ಸದಸ್ಯರಾಗಲು ಅಥವಾ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದರೊಂದಿಗೆ ಸೆಕ್ಷನ್ 3(74)ಗೆ ಸಂಬಂಧಿಸಿದ ಕಂದಾಯ ದಾಖಲೆಗಳ ನಿಬಂಧನೆಯನ್ನು ಸಹ ತಡೆಹಿಡಿಯಲಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆ 2025ರಲ್ಲಿ ಸೂಚಿಸಿರುವಂತೆ ಕಾನೂನು ಮೂಲಕ ಬಳಕೆ ಹಾಗೂ ಬಳಕೆ ಮೂಲಕ ಮತ್ತು ದಾಖಲೆ ಪತ್ರಗಳ ಮೂಲಕ ವಕ್ಫ್ ಎಂದು ಘೋಷಿಸುವ ಜಮೀನಿನ ಡಿನೋಟಿಫಿಕೇಶನ್ ಅಧಿಕಾರ ಯಾರದ್ದು ಎಂಬುದು ಇತ್ಯರ್ಥವಾಗಲಿದೆ ಎಂದು ತಿಳಿಸಿದೆ.
ಅಲ್ಲದೇ ವಕ್ಫ್ ಮಂಡಳಿ ರಚನೆ ಕುರಿತಾಗಿ ಹೇಳಿದ ಕೋರ್ಟ್, ಮಂಡಳಿಯು ಗರಿಷ್ಠ ಮೂವರು ಮುಸ್ಲಿಮೇತರ ಸದಸ್ಯರನ್ನ ಹೊಂದಿರಬಹುದು. ಆದ್ರೆ 11 ಜನರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರಾಗಿರಬೇಕು ಎಂದು ಹೇಳಿದೆ. ಸಾಧ್ಯವಾದಷ್ಟು ಮಟ್ಟಿಗೆ ಮಂಡಳಿಯ ಸಿಇಒ ಮುಸ್ಲಿಮರಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆಯಲ್ಲದೇ ವಕ್ಫ್ ಕಾಯ್ದೆಯ ಸಿಂಧುತ್ವದ ಬಗ್ಗೆ ತನ್ನ ಆದೇಶವು ಅಂತಿಮ ಅಭಿಪ್ರಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಡೀ ಕಾಯ್ದೆಯನ್ನೇ ನಿಷೇಧಿಸಲು ಯಾವುದೇ ಆಧಾರವಿಲ್ಲ. ಆದ್ರೆ ಕೆಲವು ನಿಬಂಧನೆಗಳಿಗೆ ಮಧ್ಯಂತರ ರಕ್ಷಣೆ ನೀಡಲಾಗುತ್ತಿದೆ ಎಂದು ಕೋರ್ಟ್ ತಿಳಿಸಿದೆ. ವಕ್ಫ್ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ರೆ, ಮೂರು ವಿಚಾರಗಳಿಗೆ ಅರ್ಜಿದಾರರು ತಡೆಕೋರಿ ಸಲ್ಲಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.ಕಳೆದ ಏಪ್ರಿಲ್ 3 ಮತ್ತು 4ರಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಕ್ಸ್ (ತಿದ್ದುಪಡಿ) ಕಾಯ್ದೆಯು ಅಂಗೀಕಾರಗೊಂಡಿತ್ತು.
ನ್ಯಾಯಾಲಯ ತಡೆಹಿಡಿದಿರುವ ನಿಬಂಧನೆಗಳಲ್ಲಿ ಮೊದಲನೆಯದು, ಜಿಲ್ಲಾಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸುವ ಅಧಿಕಾರ ನೀಡುವ ಅಂಶ. ಇದು ಅಧಿಕಾರಗಳ ಪ್ರತ್ಯೇಕತೆಯ ತತ್ವವನ್ನು ಉಲ್ಲಂಸುತ್ತದೆ. ಎರಡನೆಯದು ವಕ್ಫ್ ರಚಿಸಲು ವ್ಯಕ್ತಿಯು ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸಿದ್ದಿರಬೇಕು ಎಂಬ ಷರತ್ತು. ಈ ಕುರಿತಂತೆ ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆ ಈ ನಿಯಮ ಜಾರಿಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಅರ್ಜಿದಾರರ ಕೋರಿಕೆಯಂತೆ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, ತಿದ್ದುಪಡಿಯಲ್ಲಿನ ಕೆಲವು ಹೊಸ ನಿಬಂಧನೆಗಳಿಗೆ ತಡೆಯಾಜ್ಞೆಯನ್ನೂ ಕೊಟ್ಟಿದೆ.
ರಾಜ್ಯ ವಕ್ಫ್ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸಂಖ್ಯೆ ಮೂರು ಇರಬಾರದೆಂದು ಹೇಳಿರುವ ನ್ಯಾಯಾಲಯ, ವಕ್ಫ್ ಮಂಡಳಿಯ ಸದಸ್ಯರಾಗಲು ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸುವ ಷರತ್ತು ವಿಧಿಸಿದ ನಿಬಂಧನೆಯನ್ನು ತಡೆ ಹಿಡಿಯಲಾಗಿದೆ. ಸರಿಯಾದ ನಿಯಮಗಳನ್ನು ರೂಪಿಸುವವರಿಗೆ ಈ ನಿಬಂಧನೆಯನ್ನು ಜಾರಿಗೆ ತರಲಾಗುವುದಿಲ್ಲ. ಇದಲ್ಲದೆ ಸೆಕ್ಷನ್ 3(74)ಗೆ ಸಂಬಂಧಿಸಿದ ಕಂದಾಯ ದಾಖಲೆಗಳ ಒದಗಿಸುವಿಕೆಯನ್ನು ಸಹ ತಡೆ ಹಿಡಿದಿದೆ.
ಅಲ್ಲದೆ, ಮುಸ್ಲಿಮೇತರರನ್ನು ಸಿಇಒ ಆಗಿ ನೇಮಿಸುವ ಕುರಿತ ತಿದ್ದುಪಡಿಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಅಂದರೆ, ವಕ್ಫ್ ಮಂಡಳಿಯ ಅಧ್ಯಕ್ಷರು ಮುಸ್ಲಿಂ ಅಥವಾ ಹಿಂದೂಗಳಲ್ಲದವರಾಗಬೇಕೆಂಬ ಬಗ್ಗೆ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಸಾಧ್ಯವಾದರೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಮರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಬೆಂಗಳೂರಿನ ನಿವಾಸಿಗಳೇ ಗಮನಿಸಿ! ಇಂದಿನಿಂದ 3 ದಿನಗಳ ಕಾಲ ಕಾವೇರಿ ನೀರು ಬಂದ್, ಕಾರಣ ಏನು?
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


