ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಂದು ಯುದ್ಧಕ್ಕೆ ಮುನ್ನುಡಿ ಬರೆದಿದ್ದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸಿಗರ ಸ್ವರ್ಗ ಎನಿಸಿದ ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮ ವಲಯ ತತ್ತರಿಸುವಂತೆ ಮಾಡಿದೆ.
2025ರ ಮೊದಲಾರ್ಧದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.
ಜಮ್ಮು-ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ದತ್ತಾಂಶದ ಪ್ರಕಾರ, 2025ರ ಮೊದಲಾರ್ಧದಲ್ಲಿ ಕಾಶ್ಮೀರ ಕಣಿವೆ ಸುಮಾರು 7.53 ಲಕ್ಷ ಪ್ರವಾಸಿಗರನ್ನು ಸ್ವಾಗತಿಸಿದೆ.
ಮೊದಲ ಮೂರು ತಿಂಗಳಲ್ಲಿ 5.25 ಲಕ್ಷ ಪ್ರವಾಸಿಗರ ಆಗಮನದೊಂದಿಗೆ ಜಮ್ಮು-ಕಾಶ್ಮೀರ ಭರವಸೆಯ ಆರಂಭವನ್ನು ಕಂಡರೆ, ಏಪ್ರಿಲ್ 22ರಂದು ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲುಗಳಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯು ತೀವ್ರ ಕುಸಿತಕ್ಕೆ ಕಾರಣವಾಗಿದೆ.
ಇದರ ಪರಿಣಾಮವಾಗಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಒಟ್ಟಾರೆ ಶೇ.52 ರಷ್ಟು ಕುಸಿತ ಕಂಡುಬಂದಿದೆ ಎಂದು ಅಂಕಿ- ಅಂಶಗಳು ಬಹಿರಂಗಪಡಿಸಿವೆ.
ದತ್ತಾಂಶದ ಪ್ರಕಾರ, 2024ರ ಮೊದಲ ಆರು ತಿಂಗಳಲ್ಲಿ 15.65 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಾಶೀರಕ್ಕೆ ಭೇಟಿ ನೀಡಿದ್ದಾರೆ. 2023ರಲ್ಲಿ ಇದೇ ಅವಧಿಯಲ್ಲಿ, ಕಣಿವೆಯಲ್ಲಿ 13.63 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಆಗಮನ ದಾಖಲಾಗಿತ್ತು. ದೇಶೀಯ ಪ್ರವಾಸಿಗರ ಸಂಖ್ಯೆಯೂ ಶೇ.52 ರಷ್ಟು ಕಡಿಮೆಯಾಗಿದ್ದು, 2024ರಲ್ಲಿ 15.39 ಲಕ್ಷದಿಂದ 2025 ರಲ್ಲಿ 7.38 ಲಕ್ಷಕ್ಕೆ ಇಳಿದಿದೆ, ಆದರೆ ವಿದೇಶಿ ಆಗಮನ ಶೇ. 41 ರಷ್ಟು ಕಡಿಮೆಯಾಗಿದ್ದು, 25,995 ರಿಂದ 15,319 ಕ್ಕೆ ಇಳಿದಿದೆ.
ಕುತೂಹಲಕಾರಿಯಾಗಿ, 2023ಕ್ಕೆ ಹೋಲಿಸಿದರೆ 2024 ರಲ್ಲಿ ಕಾಶ್ಮೀರಕ್ಕೆ ಒಟ್ಟಾರೆ ಪ್ರವಾಸಿಗರ ಆಗಮನದಲ್ಲಿ ಶೇ.14.8 ರಷ್ಟು ಹೆಚ್ಚಳ ಕಂಡುಬಂದಿದೆ. ದೇಶೀಯ ಪ್ರವಾಸಿಗರ ಸಂಖ್ಯೆ ಶೇ. 14.2 ರಷ್ಟು ಏರಿಕೆಯಾಗಿದ್ದು, 2023 ರಲ್ಲಿ 13.48 ಲಕ್ಷದಿಂದ 2024 ರಲ್ಲಿ 15.39 ಲಕ್ಷಕ್ಕೆ ಏರಿಕೆಯಾಗಿದೆ. ವಿದೇಶಿ ಸಂದರ್ಶಕರ ಸಂಖ್ಯೆ ಶೇ.64 ರಷ್ಟು ಏರಿಕೆಯಾಗಿದ್ದು, 15,852 ರಿಂದ 25,995ಕ್ಕೆ ಏರಿಕೆಯಾಗಿದೆ.
26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಕಾಶ್ಮೀರಕ್ಕೆ ಪ್ರವಾಸಿಗರ ಆಗಮನಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಒಪ್ಪಿಕೊಂಡ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ದೇಶೀಯ ಪ್ರವಾಸಿಗರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಕಾಶ್ಮೀರವನ್ನು ತಮ್ಮ ರಜಾ ತಾಣವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು, ಆದರೆ ಪಹಲ್ಗಾಮ್ ದಾಳಿಯು ಇಡೀ ಉದ್ಯಮವನ್ನೇ ಬೆಚ್ಚಿಬೀಳಿಸಿದೆ.
ಕಣಿವೆ ಇನ್ನೂ ಅತ್ಯುತ್ತಮ ರಜಾ ತಾಣವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ದಾಳಿಯ ಹೊರತಾಗಿಯೂ ನಮ್ಮ ಮೇಲೆ ನಂಬಿಕೆ ಇಟ್ಟ ಸುಮಾರು ಎರಡು ಲಕ್ಷ ಪ್ರವಾಸಿಗರಿಗೆ ನಾನು ಕೃತಜ್ಞನಾಗಿದ್ದೇನೆ. ಅಮರನಾಥ ಯಾತ್ರೆ ನಡೆಯುತ್ತಿರುವುದರಿಂದ, ಈ ಯಾತ್ರಿಕರು ದೇಶಾದ್ಯಂತ ಸಕಾರಾತ್ಮಕ ಸಂದೇಶವನ್ನು ಹರಡುತ್ತಾರೆ ಮತ್ತು ನಮ್ಮ ಶರತ್ಕಾಲ ಮತ್ತು ಚಳಿಗಾಲದ ಋತುಗಳು ಈ ಪ್ರದೇಶಕ್ಕೆ ಉತ್ತಮ ದಿನಗಳನ್ನು ತರುತ್ತವೆ ಎಂದು ನಾವು ಆಶಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರದಲ್ಲೇ ಸಿಹಿಸುದ್ದಿ; ಕುತೂಹಲ ಹುಟ್ಟಿಸಿದ ಯತ್ನಾಳ್ ಪೋಸ್ಟ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


