ಕರ್ನಾಟಕದ ವಿವಿಧ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂದು ಬೇಡಿಕೆ ಇದೆ. ಆದರೆ ರೈಲ್ವೆ ಇಲಾಖೆ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಇದಕ್ಕೆ ಪ್ರಮುಖ ಕಾರಣ ರೈಲು ನಿರ್ವಹಣೆ ಮಾಡಲು ಅಗತ್ಯವಾದ ಡಿಪೋಗಳ ನಿರ್ಮಾಣವಾಗಿಲ್ಲ. ಪ್ರತಿ ಸಂಚಾರ ಮುಗಿದ ಬಳಿಕ ಈ ರೈಲಿನ ನಿರ್ವಹಣೆ ಮಾಡುವುದು ಅಗತ್ಯವಾಗಿದೆ.
ಈಗ ನೈಋತ್ಯ ರೈಲ್ವೆ ಸುಮಾರು 715.88 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದಲ್ಲಿ ಎರಡು ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ಡಿಪೋವನ್ನು ನಿರ್ಮಾಣ ಮಾಡುತ್ತಿದೆ. ಒಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ ಇರುವ ಹುಬ್ಬಳ್ಳಿಯಲ್ಲಿ ಮತ್ತೊಂದು ಡಿಪೋ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ.
ನೈಋತ್ಯ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಇಂಟಿಗ್ರೇಟೆಡ್ ರೋಲಿಂಗ್ ಸ್ಟಾಕ್ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತದೆ. ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಡಿಪೋ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 52.73 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣವಾಗಲಿದ್ದು, ವಂದೇ ಭಾರತ್ ರೈಲಿನ ನಿರ್ವಹಣೆಗಾಗಿ 4 ಪಿಟ್ ಲೈನ್ ಮೀಸಲಿಡಲಾಗುತ್ತದೆ.
ಥಣಿಸಂದ್ರದಲ್ಲಿ339.07 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಇಲ್ಲಿ 24 ಬೋಗಿಗಳ ನಿರ್ವಹಣೆ ಮಾಡಲು 3 ಪಿಟ್ ಲೈನ್ ನಿರ್ಮಾಣ ಮಾಡಲಾಗುತ್ತದೆ ಮತ್ತು ಬೋಗಿಗಳ ದುರಸ್ಥಿ ಕಾರ್ಯಕ್ಕೆ ಮೂಲ ಸೌಕರ್ಯ ಒದಗಿಸಲಾಗುತ್ತದೆ.
ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು 324.08 ಕೋಟಿ ರೂ. ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಇದು ಅಂತಿಮ ಹಂತದಲ್ಲಿದೆ. ಈಗಾಗಲೇ ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಹುಬ್ಬಳ್ಳಿ ಮೂಲಕ ಸಾಗುತ್ತದೆ ಮತ್ತು ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತದೆ.
ಹುಬ್ಬಳ್ಳಿಯಲ್ಲಿ24 ಬೋಗಿಗಳ ನಿರ್ವಹಣೆ ಮಾಡಲು 3 ಪಿಟ್ ಲೈನ್ ನಿರ್ಮಾಣವಾಗಲಿದೆ. ಇದರ ಜೊತೆಗೆ 390 ಮೀಟರ್ ಉದ್ದ, 20 ಮೀಟರ್ ಅಗಲದ ದುರಸ್ತಿ ಶೆಡ್ ಸಹ ನಿರ್ಮಾಣ ಮಾಡಲಾಗುತ್ತದೆ. ಈ ಮೂರು ಡಿಪೋಗಳು 2027ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಸಾಮಾನ್ಯ ರೈಲುಗಳ ನಿರ್ವಹಣೆ ಮಾಡುವ ಡಿಪೋಗಳಲ್ಲಿ ಈಗಾಗಲೇ ದಟ್ಟಣೆ ಹೆಚ್ಚಿದೆ. ಆದ್ದರಿಂದ ಆ ಡಿಪೋಗಳಲ್ಲಿ ವಂದೇ ಭಾರತ್ ನಿರ್ವಹಣೆ ಮಾಡುವುದು ಕಷ್ಟ. ಅಲ್ಲದೇ ಭವಿಷ್ಯದಲ್ಲಿ ಹೆಚ್ಚಾಗುವ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿಯೇ ಪ್ರತ್ಯೇಕ ಡಿಪೋ ನಿರ್ಮಾಣ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ವಿಜಯಪುರ, ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳು ಸಂಚಾರವನ್ನು ಆರಂಭಿಸಲಿವೆ. ಶಿವಮೊಗ್ಗ ಹೊರವಲಯದ ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋವನ್ನು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಇಲ್ಲಿ ಸಹ ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ವಂದೇ ಭಾರತ್ ರೈಲು ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು ಅದನ್ನು ನಿರ್ವಹಣೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣಗಳ ಅಗತ್ಯವಿದೆ. ಅಲ್ಲದೇ ಶೆಡ್ ತನಕ ವಿದ್ಯುತ್ ಲೈನ್ ಆಳವಡಿಕೆ ಮಾಡಬೇಕಿದೆ. ಪ್ರತಿ ಸಂಚಾರ ಪೂರ್ಣಗೊಳಿಸಿದ ನಂತರ ಈ ರೈಲುಗಳ ನಿರ್ವಹಣೆ ಅಗತ್ಯವಾಗಿದೆ.
ಆದ್ದರಿಂದ ನೈಋತ್ಯ ರೈಲ್ವೆ ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿಯೇ ರಾಜ್ಯದಲ್ಲಿ ಪ್ರತ್ಯೇಕ ಡಿಪೋವನ್ನು ನಿರ್ಮಾಣ ಮಾಡಲಿದೆ. ಇದರಿಂದಾಗಿ ರಾಜ್ಯದಲ್ಲಿ ಹೊಸ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಅನುಕೂಲವಾಗಲಿದೆ.
ಕರ್ನಾಟಕದ ಅತಿ ಹೆಚ್ಚು ವಂದೇ ಭಾರತ್ ರೈಲು ಬೆಂಗಳೂರು ನಗರದಿಂದ ಸಂಚಾರವನ್ನು ನಡೆಸುತ್ತದೆ. ಬೆಂಗಳೂರಿನಿಂದ ಧಾರವಾಡ, ಬೆಳಗಾವಿ, ಕಲಬುರಗಿ, ಕಾಚಿಗುಡ, ಎರ್ನಾಕುಲಂ ಸೇರಿದಂತೆ ಕರ್ನಾಟಕ ಮತ್ತು ಹೊರ ರಾಜ್ಯಕ್ಕೆ ಸಹ ವಂದೇ ಭಾರತ್ ರೈಲುಗಳ ಸಂಪರ್ಕವಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


