ಬಿಹಾರ ವಿಧಾನಸಭೆ ಚುನಾವಣೆ 2025ರ ಹೀನಾಯ ಸೋಲನ್ನು ಒಪ್ಪಿಕೊಂಡ ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಮೌನ ವೃತವನ್ನು ಘೋಷಣೆ ಮಾಡಿದ್ದಾರೆ. ಅವರ ‘ಜನ ಸುರಾಜ್ ‘ಪಕ್ಷ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲು ಸಹ ವಿಫಲವಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.
ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಜೆಡಿಯು-ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 202 ಸೀಟುಗಳಲ್ಲಿ ಜಯಗಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಪ್ರಶಾಂತ್ ಕಿಶೋರ್ ಬಿಹಾರ ರಾಜಕೀಯದಲ್ಲಿ ಬದಲಾವಣೆ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಪಾಟ್ನಾದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಶಾಂತ್ ಕಿಶೋರ್, “ಜನ ಸುರಾಜ್ ಪಕ್ಷದ ಹೀನಾಯ ಸೋಲಿಗೆ ನಾನೇ ಸಂಪೂರ್ಣ ಹೊಣೆ. ಶೇ 100ರಷ್ಟು ಪಕ್ಷದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದರು.
“ಬಿಹಾರದ ರಾಜಕೀಯದಲ್ಲಿ ಬದಲಾವಣೆ ತರಲು ಆಗಲಿಲ್ಲ. ಎನ್ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರ ಮಾಡಲು ಆಗಲಿಲ್ಲ. ಚುನಾವಣೆಯಲ್ಲಿ ಇತರ ಪಕ್ಷಗಳಿಗೆ ಸ್ಪರ್ಧೆ ನೀಡಲು ಸಹ ಆಗಲಿಲ್ಲ. ಜನ ಸುರಾಜ್ ಪಕ್ಷದ ಈ ಸೋಲಿಗೆ ಸಂಪೂರ್ಣವಾಗಿ ನಾನೇ ಹೊಣೆ” ಎಂದರು.
ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: “ನಾನು ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಆದ್ದರಿಂದ ಒಂದು ದಿನದ ಮೌನ ವೃತವನ್ನು ಮಾಡುತ್ತಿದ್ದೇನೆ. ನವೆಂಬರ್ 20ರಂದು ವಿದರ್ಭದ ಗಾಂಧಿ ಆಶ್ರಮದಲ್ಲಿ ಒಂದು ದಿನದ ಮೌನ ವೃತ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
“ನಾವು ಸೋಲಿನ ಕುರಿತ ವಿಮರ್ಶೆ ಮಾಡಿಕೊಳ್ಳುತ್ತೇವೆ. ಈಗ ಬಿಹಾರದಲ್ಲಿ ಕೆಲಸ ಮಾಡುವುದು ನಿತೀಶ್ ಮತ್ತು ಬಿಜೆಪಿ ಅವರ ಕೆಲಸವಾಗಿದೆ. ನನ್ನ ಜೊತೆ ಜನ ಸುರಾಜ್ ಪಕ್ಷದ ಕನಸು ಕಂಡವರಿಗೆ ನಿರಾಸೆಯಾಗಿದೆ, ಇದಕ್ಕೆಲ್ಲ ನಾನೇ ಹೊಣೆ” ಎಂದರು.
“ನಾವು ಪ್ರಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ. ಆದರೆ ಸಂಪೂರ್ಣವಾಗಿ ಅದು ವಿಫಲವಾಗಿದೆ. ರಾಜಕೀಯವನ್ನು ಬದಲಾವಣೆ ಮಾಡುವುದು ಬೇರೆ ಮಾತು, ನಾವು ಬಿಹಾರದ ಅಧಿಕಾರವನ್ನು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಆದರೆ ಬಿಹಾರವನ್ನು ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡಿದ್ದೇವೆ” ಎಂದು ತಿಳಿಸಿದರು.
2024ರ ಅಕ್ಟೋಬರ್ನಲ್ಲಿ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಯಾತ್ರೆ ನಡೆಸಿ ಜನರನ್ನು ಸಂಘಟನೆ ಮಾಡಿದ್ದರು.
ಜನ ಸುರಾಜ್ ಪಕ್ಷ ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಬಿಹಾರ ವಿಧಾನಸಭೆ ಚುನಾವಣೆಗೆ 238 ಸೀಟುಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಪ್ರಶಾಂತ್ ಕಿಶೋರ್ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ.
ಆದರೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಅಭ್ಯರ್ಥಿಗಳು 236 ಸೀಟುಗಳಲ್ಲಿ ಠೇವಣಿ ಕಳೆದುಕೊಂಡಿದ್ದರು. ಎರಡು ಸೀಟುಗಳಲ್ಲಿ ಮಾತ್ರ ಠೇವಣಿ ಬಂದಿತ್ತು. ಯಾವುದೇ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗೆ ಪೈಪೋಟಿ ನೀಡಲು ಪಕ್ಷ ವಿಫಲವಾಗಿತ್ತು.
ಬಿಹಾರ ಚುನಾವಣೆಯಲ್ಲಿ ಬಿಜೆಪಿ 89, ಜೆಡಿಯು 85, ಎಲ್ಜೆಪಿ (ಆರ್ವಿ) 19, ಹೆಚ್ಎಎಂ(ಎಸ್) 5 ಮತ್ತು ಆರ್ಎಲ್ಎಂ 4 ಸೀಟುಗಳಲ್ಲಿ ಜಯಗಳಿಸಿವೆ. ಈ ಮೂಲಕ ಎನ್ಡಿಎ ಮೈತ್ರಿಕೂಟ 202 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡಲಿದೆ.
ವಿರೋಧ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ 34 ಸೀಟುಗಳಲ್ಲಿ ಜಯಗಳಿಸಿದೆ. ಇದರಲ್ಲಿ ಆರ್ಜೆಡಿ 25, ಕಾಂಗ್ರೆಸ್ 6, ಸಿಪಿಐ(ಎಂ) 1, ಸಿಪಿಐ(ಎಂಎಲ್)(ಎಲ್) 2 ಸೀಟುಗಳನ್ನು ಗೆದ್ದಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


