ಕರ್ನಾಟಕ ಮಂಗಳವಾರ ಮಹತ್ವದ ಕಾಡಾನೆ ರಕ್ಷಣಾ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ. ಸುಮಾರು 60 ಅಡಿ ಆಳದ ಕಾಲುವೆಯಲ್ಲಿ ಮೂರು ದಿನಗಳಿಂದ ಸಿಲುಕಿದ್ದ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ, ಎನ್ಡಿಆರ್ಎಫ್, ಸ್ಥಳೀಯ ಪೊಲೀಸರು ಮಂಡ್ಯದಲ್ಲಿ ಈ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಆನೆಗೆ ಅರವಳಿಗೆ ಚುಚ್ಚುಮುದ್ದು ನೀಡಿ ಕ್ರೇನ್ ಸಹಾಯದಿಂದ 60 ಅಡಿ ಅಳದ ಕಾಲುವೆಯಿಂದ ಆನೆಯನ್ನು ಮೇಲೆತ್ತಲಾಗಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಶಿವನಸಮುದ್ರದಲ್ಲಿ ಕಾಲುವೆಗೆ ಬಿದ್ದಿದ್ದ ಆನೆಯನ್ನು ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಸಮಯೋಚಿತ ಹಾಗೂ ಸಾಹಸಮಯ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿದ್ದು ಅತ್ಯಂತ ಶ್ಲಾಘನೀಯ. ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಮೂರು ದಿನದಿಂದ ಸಿಲುಕಿದ್ದ ಆನೆ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ಪಯನಿಯರ್ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಯಲ್ಲಿ ಮೂರು ದಿನಗಳಿಂದ ಕಾಡಾನೆ ಸಿಲುಕಿತ್ತು.
ಶನಿವಾರ ರಾತ್ರಿ ವಿದ್ಯುತ್ ಕೇಂದ್ರದ ಬಳಿ ಸಂಚಾರ ಮಾಡುತ್ತಿದ್ದ ಸುಮಾರು 12 ವರ್ಷದ ಗಂಡು ಕಾಡಾನೆ ನೀರು ಕುಡಿಯಲು ಗೇಟ್ ಬಳಿ ಕಾಲುವೆಗೆ ಇಳಿದಿತ್ತು. ಆದರೆ ನೀರಿನ ರಭಸದ ಕಾರಣ ಮೇಲೆ ಹತ್ತಲಾರದೇ ಅಲ್ಲಿಯೇ ಸುತ್ತಾಡುತ್ತಿತ್ತು. ತಿನ್ನಲು ಏನೂ ಸಿಗದೆ ನಿತ್ರಾಣಗೊಂಡಿತ್ತು.
ಆನೆ ಸಿಲುಕಿರುವುದನ್ನು ನೋಡಿ ಸೋಮವಾರವೇ ಅದನ್ನು ಮೇಲೆತ್ತಲು ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಇಡೀ ದಿನ ಪ್ರಯತ್ನ ಪಟ್ಟರೂ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಆದ್ದರಿಂದ ಆನೆಗೆ ಕಾಲುವೆಯೊಳಗೆ ತಿನ್ನಲು ಹಣ್ಣು, ಕಬ್ಬು ಸೇರಿದಂತೆ ಆಹಾರವನ್ನು ನೀಡಲಾಗಿತ್ತು.
ಮಂಗಳವಾರ ಆನೆಗೆ ಎರಡು ಅರವಳಿಕೆ ಮದ್ದು ನೀಡಿ ಬೆಂಗಳೂರಿನಿಂದ ಬಂದಿದ್ದ ಬೃಹತ್ ಕ್ರೇನ್ ಮತ್ತು ಸ್ಥಳೀಯವಾದ ಎರಡು ಕ್ರೇನ್ ಬಳಕೆ ಮಾಡಿಕೊಂಡು 60 ಅಡಿ ಆಳದಿಂದ ಆನೆಯನ್ನು ಸುರಕ್ಷಿತವಾಗಿ ಮೇಲೆತ್ತಿ, ಕಾಡಿಗೆ ಬಿಡಲಾಗಿದೆ.
ಆನೆ ಸಿಲುಕಿದ್ದ ಮತ್ತು ಕಾರ್ಯಾಚರಣೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆ, ಎನ್ಡಿಆರ್ಎಫ್, ಪೊಲೀಸರು ಮತ್ತು ಸ್ಥಳೀಯರ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಒಂದು ಕಂಟೇನರ್ ಕಾಲುವೆ ಇಳಿಸಿ ಪಟಾಕಿ ಸಿಡಿಸಿ ಆನೆ ಅದರೊಳಗೆ ಹೋಗುವಂತೆ ಮಾಡಿ ಮೇಲೆತ್ತಲು ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಬಳಿಕ ಪಟಾಕಿ ಸಿಡಿಸಿ ಆನೆಯನ್ನು ಕಾಲುವೆಯ ಮಧ್ಯಭಾಗಕ್ಕೆ ಕರೆದುಕೊಂಡು ಬಂದು ಅರಣ್ಯ ಇಲಾಖೆ ಸಿಬ್ಭಂದಿ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿದರು.
ಎರಡು ಇಂಜೆಕ್ಷನ್ ಬಳಿಕ ಸುಮಾರು 30 ನಿಮಿಷ ಘೀಳಿಡುತ್ತಾ ಓಡಾಡುತ್ತಿದ್ದ ಆನೆ ಬಳಿಕ ನಿತ್ರಾಣಗೊಂಡು ಕಾಲುವೆಯಲ್ಲಿ ಮಲಗಿತು. ಆಗ ವೈದ್ಯರು ಅದಕ್ಕೆ ಚಿಕಿತ್ಸೆ ನೀಡಿದರು. ಕಬ್ಬಿಣದ ಸ್ಟ್ರೆಚ್ಚರ್ ಮೇಲೆ ಆನೆಯನ್ನು ಮಲಗಿಸಿ, ಕ್ರೇನ್ ಸಹಾಯದಿಂದ ಅದನ್ನು ಮೇಲೆ ತಂದರು.
ಆನೆಗೆ ಮತ್ತೆ ಚಿಕಿತ್ಸೆ ನೀಡಿ, ಅದರ ಆರೋಗ್ಯದ ಬಗ್ಗೆ ಖಚಿತ ಪಡಿಸಿಕೊಂಡ ಬಳಿಕ ಕಾವೇರಿ ವನ್ಯಜೀವಿ ಅರಣ್ಯಕ್ಕೆ ಬಿಡಲಾಗಿದೆ. ಸುಮಾರು 100ಕ್ಕೂ ಅಧಿಕ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಾಚರಣೆ ಕುರಿತು ಉಪ ಸಂರಕ್ಷಣಾಧಿಕಾರಿ ಡಿ.ರಘು ಮಾತನಾಡಿ, “ಅತ್ಯಂತ ಸವಾಲಿನ ಕಾರ್ಯಾಚರಣೆ ಇದಾಗಿತ್ತು. ಆದರೆ ಹಿರಿಯ ಅಧಿಕಾರಿಗಳು, ತಜ್ಞ ವೈದ್ಯರ ನೆರವಿನಿಂದ ಯಶಸ್ವಿಯಾಗಿ ಆನೆಯನ್ನು ರಕ್ಷಣೆ ಮಾಡಿದ್ದೇವೆ. ಅರಣ್ಯ ಸಚಿವರು ಸಹ ಸದಾ ಸಂಪರ್ಕದಲ್ಲಿದ್ದು ಆನೆಯ ಸುರಕ್ಷತೆ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


