ನವೆಂಬರ್ 19ರಂದು ಬೆಂಗಳೂರು ನಗರದಲ್ಲಿ ಹಾಡಹಗಲೇ ಎಟಿಎಂಗೆ ಹಣ ತುಂಬುವ ವಾಹವನ್ನು ದರೋಡೆ ಮಾಡಲಾಗಿದೆ. 7.11 ಕೋಟಿ ರೂ. ಹಣದ ಜೊತೆ ದರೋಡೆಕೋರರು ಪರಾರಿಯಾಗಿದ್ದಾರೆ. ಈಗ ಕೇರಳದಲ್ಲಿ ಕರ್ನಾಟಕದಿಂದ ಬಂದ ಕಾರಿನಲ್ಲಿ ದಾಖಲೆ ಇಲ್ಲದ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ.
ಶುಕ್ರವಾರ ಕೇರಳ ಕಸ್ಟಮ್ಸ್ ಅಧಿಕಾರಿಗಳು ಕರ್ನಾಟಕದಿಂದ ಬಂದ ಕಾರನ್ನು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಹಣ ಸಾಗಾಟ ಮಾಡುವ ದೊಡ್ಡ ಜಾಲ ಇರುವ ಅನುಮಾನ ಉಂಟಾಗಿದೆ. ಕಾರ್ಯಾಚರಣೆಯ ವೇಳೆ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ರೂ. 3.15 ಕೋಟಿ ಮೊತ್ತದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಹಣವನ್ನು ಕರ್ನಾಟಕದಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಬೃಹತ್ ಮೊತ್ತದ ಹಣವನ್ನು ಸಾಗಣೆ ಮಾಡಲು ಕಾರಿನಲ್ಲಿ ವಿಶೇಷವಾದ ಉಕ್ಕಿನ ಬಾಕ್ಸ್ ವಿನ್ಯಾಸ ಮಾಡಲಾಗಿತ್ತು. ಇಂತಹ ತಂತ್ರದ ಮೂಲಕ ವಾಹನ ತಪಾಸಣೆ ವೇಳೆ ಅಧಿಕಾರಿಗಳ ದಾರಿ ತಪ್ಪಿಸಬಹುದು ಎಂಬುದು ಲೆಕ್ಕಾಚಾರವಾಗಿತ್ತು.
ಶುಕ್ರವಾರ ನಡೆದ ವಿಶೇಷ ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ವಾಹನದ ವಿನ್ಯಾಸದ ಕುರಿತು ಅನುಮಾನ ಉಂಟಾಗಿದೆ. ಆಗ ವಿವರವಾಗಿ ಪರಿಶೀಲನೆ ನಡೆಸಿದಾಗ ಹಲವಾರು ಉಕ್ಕಿನ ಬಾಕ್ಸ್ಗಳಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಇದು ಉಭಯ ರಾಜ್ಯಗಳ ನಡುವಿನ ಹಣ ಕಳ್ಳಸಾಗಣೆ ತಂಡದ ಕಾರ್ಯ ಎಂದು ಶಂಕಿಸಲಾಗಿದೆ.
ದೊಡ್ಡ ಮಟ್ಟದ ಅಕ್ರಮ ಹಣ ಕಳ್ಳಸಾಗಣೆ ಜಾಲ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಕಾರಿನಲ್ಲಿ ಹಣ ಪತ್ತೆ ಪ್ರಕರಣದ ಕುರಿತು ವಡಕರ ಮೂಲ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಪ್ರಾಥಮಿಕವಾಗಿ ಹಣ ಸಲ್ಮಾನ್ ಕಂದಥಿಲ್ ಎಂಬ ವ್ಯಕ್ತಿಗೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ. ಇವನು ಈ ಕಳ್ಳಸಾಗಣೆ ಜಾಲದ ಪ್ರಮುಖ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಹಣದ ಮೂಲ ಮತ್ತು ಅದು ಎಲ್ಲಿಗೆ ಹೋಗಬೇಕಿತ್ತು? ಎಂಬುದನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 7 ಕೋಟಿ 11 ಲಕ್ಷ ರೂ. ಹಣವನ್ನು ದೋಚಿದ ಆಘಾತಕಾರಿ ಘಟನೆ ನಡೆದ ಕೆಲವೇ ದಿನಗಳಲ್ಲಿ ಕರ್ನಾಟಕದಿಂದ ಬಂದ ಕಾರಿನಲ್ಲಿ ದಾಖಲೆ ಇಲ್ಲದ ಹಣ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉಭಯ ರಾಜ್ಯಗಳಲ್ಲಿ ಅಕ್ರಮ ಹಣ ಕಳ್ಳಸಾಣೆ ಹಾಗೂ ಅಪರಾಧ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಜಾಲದ ಇತರ ಸದಸ್ಯರನ್ನು ಗುರುತಿಸಲು ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಟಿಎಂ ವಾಹನ ದರೋಡೆ ಅಪ್ಡೇಟ್: ಬೆಂಗಳೂರು ನಗರದಲ್ಲಿ ನಡೆದ ಎಟಿಎಂ ವಾಹನ ದರೋಡೆ ಪ್ರಕರಣದ ಹಣ ಇದಲ್ಲ ಎಂಬ ಮಾಹಿತಿ ಸಿಕ್ಕಿದೆ. ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು 5.30 ಕೋಟಿ ರೂ. ಹಣವನ್ನು ಆಂಧ್ರ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ದರೋಡೆ ಕೃತ್ಯಕ್ಕೆ ಬಳಸಲಾಗಿದ್ದ ಇನ್ನೋವಾ ಕಾರು ಪತ್ತೆಹಚ್ಚಿದ್ದ ಪೊಲೀಸರು ಈಗ 5.30 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.
ದರೋಡೆ ಕೇಸ್ ಪ್ರಮುಖ ಆರೋಪಿ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ಮತ್ತು ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿಯನ್ನು ಬಂಧಿಸಿದ್ದಾರೆ. ಉಳಿದ ಹಣ ಮತ್ತು ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


