ಬೆಂಗಳೂರು: ಧರ್ಮಸ್ಥಳ ಭಾಗದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಹಾಗೂ ಅಸಹಜ ಸಾವಿನ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ವಿಶೇಷ ದಳದ ಸದಸ್ಯರಲ್ಲಿ ಯಾರಾದರೂ ಹಿಂದೆ ಸರಿಯಲು ಬಯಸಿದರೆ ರಾಜ್ಯ ಸರ್ಕಾರ ಬೇರೆಯವರನ್ನು ನೇಮಿಸಲು ಸಿದ್ಧವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ. ಅದರ ಮುಖ್ಯಸ್ಥರಾದ ಡಿಜಿಪಿ ಪ್ರಣವ್ ಮೊಹಂತಿ ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಲಭ್ಯ ಇರುವ ದಾಖಲಾತಿಗಳನ್ನು ಆಧರಿಸಿ ತನಿಖೆಯನ್ನು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಈಗಾಗಲೇ ಎಸ್ಐಟಿ ಸಮಿತಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೂ ಸೂಚನೆ ನೀಡಿದ್ದಾರೆ ಎಂದರು.
ಸದ್ಯಕ್ಕೆ ಎಸ್ಐಟಿಯಲ್ಲಿ ಆದೇಶದಲ್ಲಿ ಉಲ್ಲೇಖಿಸಿರುವಂತೆ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳು ಇರುತ್ತಾರೆ. ಒಂದು ವೇಳೆ ಯಾರಾದರೂ ಹಿಂದೆ ಸರಿಯಲು ಬಯಸಿದರೆ ಅವರನ್ನು ಪೊಲೀಸ್ ಮಹಾ ನಿರ್ದೇಶಕರು ಬದಲಾಯಿಸುತ್ತಾರೆ. ನಿನ್ನೆ ತಮಗೆ ಯಾರೋ ಮಾಹಿತಿ ನೀಡಿ ಕೆಲ ಅಧಿಕಾರಿಗಳು ಹಿಂದೆ ಸರಿಯುವ ಸಾಧ್ಯತೆಯಿದೆ ಎಂದಿದ್ದರು. ಮಾಧ್ಯಮದಲ್ಲೂ ಇದು ವರದಿಯಾಗಿತ್ತು. ಯಾವುದೇ ಕಾರಣಕ್ಕಾದರೂ ಹಿಂದೆ ಸರಿಯಲು ಮುಂದೆ ಬಂದರೆ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲು ಎಲ್ಲಾ ಅವಕಾಶಗಳಿವೆ. ಅದೇನು ದೊಡ್ಡ ಸಮಸ್ಯೆಯಲ್ಲ ಎಂದು ಹೇಳಿದರು.
2014 ರಿಂದ 2017ರವರೆಗೆ ಧರ್ಮಸ್ಥಳ ಭಾಗದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ 2018ರಲ್ಲಿ ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿ ನೀಡಿರುವ ವರದಿ ಲಭ್ಯವಿದ್ದರೆ ಅದನ್ನು ಪರಿಶೀಲಿಸುತ್ತೇವೆ. ಯಾರು ವರದಿ ಕೊಟ್ಟಿದ್ದಾರೆ, ತಜ್ಞರನ್ನು ಯಾರು ನೇಮಿಸಿದ್ದರು ಎಂಬ ವಿಚಾರಗಳು ನಮ್ಮ ಗಮನಕ್ಕಿನ್ನೂ ಬಂದಿಲ್ಲ. ಈ ವರದಿ ಇರುವುದೂ ಗೊತ್ತಿಲ್ಲ. ಒಂದು ವೇಳೆ ಇದ್ದರೆ ಅದನ್ನು ಪರಿಶೀಲಿಸುತ್ತೇವೆ ಎಂದರು.
ರಾಜ್ಯ ಸರ್ಕಾರ ತನಿಖೆಗೆ ಎಸ್ಐಟಿ ರಚನೆ ಮಾಡುತ್ತಿದ್ದಂತೆ ಬಿಜೆಪಿಯವರು ಬೇರೆಬೇರೆ ರೀತಿಯಲ್ಲಿ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಎಸ್ಐಟಿ ತನಿಖೆಗೆ ವಿರೋಧ ಮಾಡುತ್ತಿರುವುದಾದರೂ ಏಕೆ ಎಂದು ಗೊತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಬಿಜೆಪಿಯವರ ಮನಸ್ಸಿನಲ್ಲಿ ಬೇರೆ ಏನೋ ಇದ್ದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


