ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂಗೆ ಹಣ ತುಂಬುವ ವಾಹನವನ್ನು ಹಾಡಹಗಲೇ ತಡೆದು 7.11 ಕೋಟಿ ರೂಪಾಯಿ ದರೋಡೆ ಮಾಡಿದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಕುರಿತು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿಯೇ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ದರೋಡೆ ಪ್ರಕರಣದ ತನಿಖೆಗೆ 200 ಪೊಲೀಸರು ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಿಸಿಬಿ, ನಗರದ ದಕ್ಷಿಣ ವಿಭಾಗದ ಪೊಲೀಸರ ತಂಡ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ಸಂಬಂಧ ಇದುವರೆಗೂ 30 ಜನರ ವಿಚಾರಣೆ ನಡೆಸಲಾಗಿದ್ದು, 3 ಜನರನ್ನು ಬಂಧಿಸಲಾಗಿದೆ ಎಂದರು.
ನವೆಂಬರ್ 19ರ ಮಧ್ಯಾಹ್ನ ದರೋಡೆಯಾದ 7.11 ಕೋಟಿ ರೂ.ಗಳಲ್ಲಿ 5 ಕೋಟಿ 76 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಆಯುಕ್ತರು ಹೇಳಿದ್ದಾರೆ. ದರೋಡೆ ಪ್ರಕರಣದ ಕುರಿತು ಸುಮಾರು 1.30 ತಾಸು ತಡವಾಗಿ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ. ಆದರೂ ಸಹ ಕ್ಷಿಪ್ರವಾಗಿ ತನಿಖೆ ನಡೆಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳ ವಿವರ: ಪೊಲೀಸ್ ಆಯುಕ್ತರ ಮಾಹಿತಿ ಪ್ರಕಾರ ಬಂಧಿತ ಆರೋಪಿಗಳ ಪೈಕಿ ಒಬ್ಬ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಈತನೇ ದರೋಡೆ ಕೇಸ್ನ ಪ್ರಮುಖ ಆರೋಪಿ.
ಮತ್ತೊಬ್ಬ ಆರೋಪಿ ಸಿಎಂಎಸ್ ಏಜೆನ್ಸಿಯ ಮಾಜಿ ಉದ್ಯೋಗಿ. ಮತ್ತೊಬ್ಬ ಆರೋಪಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಎಂದು ಆಯುಕ್ತರು ದರೋಡೆ ಕೇಸ್ ವಿವರಗಳನ್ನು ನೀಡಿದರು.
50 ಗಂಟೆಯಲ್ಲಿ ಕ್ಷಿಪ್ರವಾಗಿ ತನಿಖೆ ನಡೆಸಿ 5 ಕೋಟಿ 76 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಣ ಬೇರೆ ಬೇರೆ ಕಡೆ ಇರುವ ಮಾಹಿತಿ ಇದ್ದು, ಅದನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಆಯುಕ್ತರು ವಿವರಿಸಿದರು.
ಈ ದರೋಡೆ ಪ್ರಕರಣದಲ್ಲಿ 7-8 ಜನರು ಶಾಮೀಲಾಗಿರುವ ಮಾಹಿತಿ ಇದೆ. ಸದ್ಯ ನಾವು 3 ಆರೋಪಿಗಳನ್ನು ಬಂಧಿಸಿದ್ದೇವೆ, ತನಿಖೆ ಇನ್ನೂ ನಡೆಯುತ್ತಿದೆ. ನಿಖರವಾಗಿ ತಂಡದಲ್ಲಿ ಎಷ್ಟು ಜನರು ಇದ್ದರು ಎಂದು ತನಿಖೆ ಮಾಡಲಾಗುತ್ತಿದೆ ಎಂದರು.
ಇನ್ನೋವಾ ಕಾರಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ನಂಬರ್ ಪ್ಲೇಟ್ ನಕಲಿಯಾಗಿತ್ತು. ಆದರೆ ಕಾರು ಎಲ್ಲಿ ಚಲಿಸಿದೆ ಎಂದು ನಿಖರವಾಗಿ ಮಾಹಿತಿ ಪಡೆದು ಕಾರನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರು ನಗರದ ಹೊರವಲಯದ ಒಂದು ಪ್ರದೇಶದಲ್ಲಿಯೇ ನಾವು 5 ಕೋಟಿ 76 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಆಯುಕ್ತರು ವಿವರಣೆ ಕೊಟ್ಟರು.
ಈ ಪ್ರಕರಣ ಬಹಳ ಸವಾಲಿನದಾಗಿತ್ತು. ಒಂದು ಈ ಪ್ರಕರಣದಲ್ಲಿ ದೊಡ್ಡ ಮೊತ್ತದ ಹಣವಿತ್ತು ಮತ್ತು ನಗರದ ವ್ಯಾಪ್ತಿಯಲ್ಲಿ ಹಾಡಹಗಲೇ ಇಷ್ಟು ದೊಡ್ಡ ದರೋಡೆ ನಡೆದಿತ್ತು. ನಾವು, ನಮ್ಮ ಸಿಬ್ಭಂದಿಗಳು ಹಗಲು, ರಾತ್ರಿ ಕೆಲಸ ಮಾಡಿ ಪ್ರಕರಣವನ್ನು ಪತ್ತೆ ಹಚ್ಚಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.
ಇಷ್ಟು ಇದುವರೆಗಿನ ತನಿಖೆಯ ಮಾಹಿತಿಯಾಗಿದೆ. ಆರೋಪಿಗಳ ಪ್ರಕಾರ 3 ತಿಂಗಳಿನಿಂದ ಅವರು ಈ ದರೋಡೆಗಾಗಿ ಪ್ಲಾನ್ ಮಾಡುತ್ತಿದ್ದರು. ಕಳೆದ 15 ದಿನದಿಂದ ಆ ಏರಿಯಾಗೆ ಭೇಟಿ ಮಾಡುತ್ತಿದ್ದರು. ಎಲ್ಲೆಲ್ಲಿ ಸಿಸಿಟಿವಿ ಇದೆ ಎಂಬುದು ಸೇರಿದಂತೆ ವಿವಿಧ ಮಾಹಿತಿ ಸಂಗ್ರಹ ಮಾಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


