ರಸ್ತೆ ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿ, ಮೊಬೈಲ್ನಿಂದ 80,000 ರೂ.ಗಳನ್ನು ಫೋನ್ ಪೇ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ಮೊಬೈಲ್, ವ್ಯಕ್ತಿಯಿಂದ ಪಡೆದಿದ್ದ 80,000 ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಘಟನೆ ಕುರಿತು ಪ್ರಕಟಣೆ ಮೂಲಕ ವಿವರ ನೀಡಿದ್ದಾರೆ. ಡಿಸೆಂಬರ್ 19 ರಂದು ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮದ ಅಂಕನಾಯಕ ಎಂಬುವವರು ಡಿಸೆಂಬರ್ 18ರಂದು ಸಹೋದರ ಗಣೇಶ್ ಕಡಕೊಳ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ವಾಪಸ್ ಬರುವಾಗ ನಾಯಿ ಅಡ್ಡ ಬಂದ ಕಾರಣ ಬಿದ್ದು ಪ್ರಜ್ಞೆ ತಪ್ಪಿತ್ತು ಎಂದು ದೂರು ನೀಡಿದ್ದರು.
ಆಗ ರಸ್ತೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಇವರನ್ನು ಎತ್ತಿ ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಗಣೇಶ ಅವರ ಕಡೆಯಿಂದ ಬಲವಂತವಾಗಿ ಯುಪಿಐ ಪಿನ್ ನಂಬರ್ ಪಡೆದು ಫೋನ್ ಪೇ ಮೂಲಕ 80,000 ರೂ.ಗಳನ್ನು ಹಾಕಿಕೊಂಡು ಆಸ್ಪತ್ರೆಗೂ ಸಹ ಸೇರಿಸದೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದರು, ಪ್ರಕರಣ ದಾಖಲು ಮಾಡಿಕೊಂಡರು.
ಹುಡುಕಾಟ ಆರಂಭಿಸಿದ ಪೊಲೀಸರು: ಆರೋಪಿಯ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್. ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಮಲ್ಲತ್ ಹಾಗೂ ಎಲ್.ನಾಗೇಶ್ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಆರ್.ಶ್ರೀಕಾಂತ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಯಿತು.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್. ಎಸ್.ಪಿ, ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ.ಎಸ್, ರಂಗಸ್ವಾಮಿ.ಹೆಚ್.ವಿ, ಬಸವರಾಜು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ರಮೇಶ (25), ಮನು (25) ಇವರನ್ನು ಮೈಸೂರು ತಾಲೂಕು ರಾಮಬಾಯಿನಗರದಲ್ಲಿ ವಶಕ್ಕೆ ಪಡೆದು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆರೋಪಿಗಳಿಂದ ಕಡೆಯಿಂದ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಹಾಗೂ ನೊಂದ ವ್ಯಕ್ತಿ ಗಣೇಶ್ ಅವರಿಂದ ಮೋಸದಿಂದ ಪಡೆದಿದ್ದ 80,000 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಉಪಾಧೀಕ್ಷ ಆರ್.ಶ್ರೀಕಾಂತ್, ಪೊಲೀಸ್ ನಿರೀಕ್ಷಕ ಸುನೀಲ್.ಎಸ್.ಪಿ, ಪೊಲೀಸ್ ಉಪ ನಿರೀಕ್ಷ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ.ಎಸ್, ರಂಗಸ್ವಾಮಿ.ಹೆಚ್.ವಿ, ಬಸವರಾಜು ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ.ಎನ್ ಶ್ಲಾಘಿಸಿದ್ದಾರೆ.
ಇಬ್ಬರು ಆರೋಪಿಗಳು ಮೈಸೂರು ನಗರದವರು. ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ರಸ್ತೆ ಅಪಘಾತದಲ್ಲಿ ವ್ಯಕ್ತಿ ಗಾಯಗೊಂಡಿದ್ದು, ನೋಡಿ ಅವರನ್ನು ಆಸ್ಪತ್ರೆಗೆ ಸೇರಿಸುವ ಭರವಸೆ ಕೊಟ್ಟು ಹಣವನ್ನು ತಮ್ಮ ಅಕೌಂಟ್ಗೆ ಹಾಕಿಕೊಂಡು, ಅವರನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


