ನವದೆಹಲಿ: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಯಾವುದೇ ಯೋಜನೆ ಅಥವಾ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದೆ.
ಕೆಲ ದಿನಗಳ ಹಿಂದೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಪದಗಳು ಬೇಕೆ? ಎಂಬುದರ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ದೇಶದ ನಾನಾ ಕಡೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
ಈ ಎಲ್ಲಾ ಗೊಂದಲಗಳಿಗೆ ಪೂರ್ಣವಿರಾಮ ಹಾಕಿರುವ ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾವನೆ ನಮ್ಮ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ.
ಸಂವಿಧಾನದ ಪೀಠಿಕೆಯಲ್ಲಿ “ಸಮಾಜವಾದ” ಮತ್ತು “ಜಾತ್ಯಾತೀತತೆ” ಎಂಬ ಪದಗಳ ಬಳಕೆಯನ್ನು ಸರ್ಕಾರ ಮರುಪರಿಶೀಲಿಸುತ್ತಿದೆಯೇ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ಜಿ ಲಾಲ್ ಸುಮನ್ ಕೇಳಿದ್ದ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, 1976ರ ತಿದ್ದುಪಡಿಯನ್ನು (42ನೇ ಸಾಂವಿಧಾನಿಕ ತಿದ್ದುಪಡಿ) ಪ್ರಶ್ನಿಸುವ ಅರ್ಜಿಗಳನ್ನು ಸುಪ್ರೀಂಕೋರ್ಟ್ 2024ರ ನವೆಂಬರ್ನಲ್ಲಿ ವಜಾಗೊಳಿಸಿದೆ. ಆದರೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವು ಪೀಠಿಕೆಗೆ ವಿಸ್ತರಿಸುತ್ತದೆ ಎಂದು ದೃಢಪಡಿಸಿದರು.
ಭಾರತೀಯ ಸಂದರ್ಭದಲ್ಲಿ ‘ಸಮಾಜವಾದ’ವು ಕಲ್ಯಾಣ ರಾಜ್ಯವನ್ನು ಸೂಚಿಸುತ್ತದೆ ಮತ್ತು ಖಾಸಗಿ ವಲಯದ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ. ಆದರೆ ‘ಜಾತ್ಯಾತೀತತೆ’ ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿದೆ” ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಕೆಲವು ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ವಾತಾವರಣ ಸೃಷ್ಟಿಸುತ್ತಿದ್ದಾರೆಯೇ ಎಂಬ ಎಸ್ಪಿ ಸಂಸದರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮೇಘವಾಲ್, ಕೆಲವು ಗುಂಪುಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರಬಹುದು ಅಥವಾ ಈ ಪದಗಳ ಮರುಪರಿಶೀಲನೆಗೆ ಪ್ರತಿಪಾದಿಸುತ್ತಿರಬಹುದು. ಅಂತಹ ಚಟುವಟಿಕೆಗಳು “ಸಮಸ್ಯೆಯ ಸುತ್ತ ಸಾರ್ವಜನಿಕ ಚರ್ಚೆ ಅಥವಾ ವಾತಾವರಣವನ್ನು ಸೃಷ್ಟಿಸಬಹುದು, ಆದರೆ ಸರ್ಕಾರದ ಅಧಿಕೃತ ನಿಲುವು ಅಥವಾ ಕ್ರಮಗಳನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಅವರು ಹೇಳಿದರು.
ಧರ್ಮಸ್ಥಳ ಸರಣಿ ಕೊಲೆ: ಜುಲೈ 16ರ ಬಳಿಕ ಎಲ್ಲಿಯೂ ಕಾಣಿಸಿಲ್ಲ ದೂರುದಾರ; ಈಗ ಎಲ್ಲಿದ್ದಾನೆ?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


