ಕನಕಪುರ: ಮುಖ್ಯಮಂತ್ರಿ ಮಾಡಿ ಎಂದು ತಾವು ಯಾರನ್ನು ಕೇಳಿಲ್ಲ. ಐದಾರು ಮಂದಿ ಮಧ್ಯೆ ದೆಹಲಿಯಲ್ಲಿ ನಡೆದ ಮಾತುಕತೆಯ ಗುಟ್ಟನ್ನು ಬಿಟ್ಟುಕೊಡಲು ನಾನು ಸಿದ್ಧನಿಲ್ಲ. ನನಗೆ ಪಕ್ಷ ಮುಖ್ಯ. ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಮುಜುಗರ ತರಲು ಅಥವಾ ದುರ್ಬಲಗೊಳಿಸಲು ನಾನು ಸಿದ್ಧನಿಲ್ಲ. ಪಕ್ಷ ಮತ್ತು ಕಾರ್ಯಕರ್ತರಿದ್ದರೆ ಮಾತ್ರ ನಾವು ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಏಳುವರೆ ವರ್ಷ ಪೂರ್ಣಗೊಳಿಸಿದ್ದಾರೆ. ಮುಂದಿನ ಬಜೆಟ್ ಅನ್ನು ಮಂಡಿಸುತ್ತೇನೆ ಎಂದಿದ್ದಾರೆ, ಬಹಳ ಸಂತೋಷ. ಅವರು ಕಾಂಗ್ರೆಸ್ಗೆ ದೊಡ್ಡ ಆಸ್ತಿ. ವಿರೋಧ ಪಕ್ಷದ ನಾಯಕರಾಗಿಯೂ ದುಡಿದಿದ್ದಾರೆ, ಪಕ್ಷ ಕಟ್ಟಿದ್ದಾರೆ. ನಾವೆಲ್ಲ ಸೇರಿ 2028ರ ವಿಧಾನಸಭೆ ಚುನಾವಣೆ, 2029ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದರು.
ಈ ಮೂಲಕ ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷವೂ ನಾನೇ ಸಿಎಂ, ಮುಂದಿನ ಬಜೆಟ್ ಅನ್ನೂ ಸಹ ನಾನೇ ಮಂಡಿಸುತ್ತೇನೆ ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆ ಹೇಳಿಕೆ ಮುಖ್ಯಮಂತ್ರಿ ಬದಲಾವಣೆ ಚರ್ಚೆಯನ್ನು ತಣ್ಣಗಾಗಿಸುವಂತಿದೆ.
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕಾರಣಕ್ಕೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ಸಂದರ್ಭದಲ್ಲಿ ನಾನು ಮಹದೇವಪ್ಪ ಅವರ ಕ್ಷೇತ್ರಕ್ಕೂ ಹೋಗಿ ನನ್ನ ಮುಖ ನೋಡಿ ಮತ ಹಾಕಿ ಎಂದಿದ್ದೇನೆ. ಮಂಡ್ಯದಲ್ಲೂ ಇದೇ ರೀತಿ ಕೇಳಿದ್ದೇನೆ. ಜನ ಸಾಮೂಹಿಕ ನಾಯಕತ್ವಕ್ಕೆ ಮತ ಕೊಟ್ಟಿದ್ದಾರೆ. ಇಲ್ಲಿ ನನ್ನಿಂದಲೇ ಆಯಿತು ಎನ್ನುತ್ತಿಲ್ಲ ಎಂದರು.
ನಾಯಕರಿಗಿಂತಲೂ ಕಾರ್ಯಕರ್ತರು ಪ್ರಾಣ ಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಾವುಟ ಕಟ್ಟಿ, ಬಡಿದಾಡಿಕೊಂಡು ಪಕ್ಷವನ್ನು ಗೆಲ್ಲಿಸಿದ್ದಾರೆ. ನಾವು ಈವರೆಗೂ ಅವರಿಗೆ ಯಾವ ಅಧಿಕಾರವನ್ನು ನೀಡಿಲ್ಲ. ಶಾಸಕರು ಕಾರ್ಯಕರ್ತರ ಶ್ರಮದ ಫಲಾನುಭವಿಗಳು. ಮೇಕೆದಾಟು ಪಾದಯಾತ್ರೆಗೆ ಯಾರು ಇಲ್ಲದಾಗ ಎಂದಾಗ ನಡೆದೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ನಾವು ನಿರ್ಧಾರ ಮಾಡಿದ್ದೆವು. ಕಾರ್ಯಕರ್ತರು ಊಟ, ನೀರು ಕೊಟ್ಟು ಬೆಂಬಲಿಸಿದ್ದಾರೆ ಎಂದರು.
ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


