ಬೆಂಗಳೂರು: ನನಗೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಗೊತ್ತು. ಆದರೆ ಆಣೆ ಪ್ರಮಾಣ, ರಾಹು ಕಾಲ, ಗುಳಿಕೆ ಕಾಲದ ಬಗ್ಗೆ ತಿಳಿದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ ರವಿಯನ್ನು ಆಣೆ ಪ್ರಮಾಣಕ್ಕೆ ಆಹ್ವಾನ ಮಾಡಿರುವ ಕುರಿತಾದ ಪ್ರಶ್ನೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ನಾನು ಆಣೆ ಪ್ರಮಾಣ, ರಾಹು ಕಾಲ ಇದಕ್ಕೆಲ್ಲಾ ಹೋದವನೂ ಅಲ್ಲ, ಹಾಗೂ ಫಾಲೋ ಮಾಡಿದವನೂ ಅಲ್ಲ. ಬದಲಾಗಿ ವೈಜ್ಞಾನಿಕವಾಗಿ ಕಾನೂನು ಪ್ರಕಾರವಾಗಿ ಎಲ್ಲವೂ ನಡೆಯಬೇಕಾಗಿದೆ ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಧಿವೇಶನದಲ್ಲೇ ಅಸಭ್ಯ ಪದ ಬಳಕೆ ವಿಚಾರವಾಗಿ ಸಿಟಿ ರವಿ ವಿರುದ್ಧ ಪ್ರಕರಣ ಸಿಐಡಿಯಲ್ಲಿದೆ. ಈ ನಡುವೆ ತಪ್ಪು ಮಾಡಿಲ್ಲವಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಲಿ ಎಂಬ ಸವಾಲನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ಹಾಕಿದ್ದು, ಆಣೆ ಪ್ರಮಾಣ ಮಾಡಲೂ ರೆಡಿ ಎಂದು ಬಿಜೆಪಿ ಎಂಎಲ್ಸಿ ಸಿಟಿ ರವಿ ಸವಾಲು ಸ್ವೀಕರಿಸಿದ್ದಾರೆ. ಪ್ರಕರಣ ತನಿಖೆ ಮುಗಿಯಲಿ ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೂ ಹೋಗುತ್ತೇನೆ, ಅಲ್ಲಿ ಹರಕೆ ಇದೆ, ಬಳಿಕ ಮಂಜುನಾಥನ ಸನ್ನಿಧಿಗೂ ಹೋಗುತ್ತೇನೆಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಆಣೆ ಪ್ರಮಾಣದ ಬಗ್ಗೆ ನನಗೆ ಗೊತ್ತಿಲ್ಲ, ಪ್ರಕರಣದ ವೈಜ್ಞಾನಿಕ ತನಿಖೆ ಆಗಬೇಕು ಎಂದು ಎಚ್ ಸಿ ಮಹದೇವಪ್ಪ ಸಿಟಿ ರವಿಗೆ ಟಾಂಗ್ ನೀಡಿದ್ದಾರೆ.
ಸಿಟಿ ರವಿ ಹೆಬ್ಬಾಳ್ಕರ್ ಗಲಾಟೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ಕೊಟ್ಟಿದೆ. ಅಲ್ಲಿ ತನಿಖೆ ಆಗಿ ಸತ್ಯ ಹೊರಗೆ ಬರಲಿ ಎಂದ ಅವರು, ಸಿಐಡಿ ತನಿಖೆಗೆ ಸಭಾಪತಿಗಳ ವಿರೋಧ ವಿಚಾರವಾಗಿ ಮಾತನಾಡಿ, ಸದನದಲ್ಲಿ ನಡೆದಾಗ ಅವರ ವ್ಯಾಪ್ತಿಗೆ ಬರುತ್ತದೆ. ಸಭಾಪತಿಗಳ ಕಾರ್ಯವ್ಯಾಪ್ತಿಯೇ ಅಂತಿಮ. ಆದರೆ ಹೇಳಿಕೆಗಳನ್ನ ಗಮನಿಸಿ ತನಿಖೆ ನೀಡಲಾಗಿದೆ ಎಂದರು.
ತುಚ್ಛ ಪದ ಬಳಸೋದು ಸರಿಯೇ?
ಸಿಟಿ ರವಿ ಅವರು ನೀಡಿರುವ ಹೇಳಿಕೆ ಗಮನಿಸಿ ಸಿಐಡಿ ಅಧಿಕಾರಿಗಳು ತನಿಖೆ ಮಾಡ್ತಾರೆ. ತುಚ್ಛ ಪದ ಬಳಸೋದು ಸರಿಯೇ? ವ್ಯಕ್ತಿಯ ತೇಜೋವಧೆ ಮಾಡೋದು ಸರಿಯೇ? ನನ್ನನ್ನ ಸೇರಿ ಯಾರೇ ಇದ್ದರೂ ಅಷ್ಟೇ. ಎಲ್ಲರಿಗೂ ಅದು ಅನ್ವಯವಾಗಲಿ.ಆಣೆ ಪ್ರಮಾಣ ಮಾಡುವ ವಿಚಾರವಾಗಿ ಇದೇ ವೇಳೆ ಮಾತನಾಡಿ, ಪ್ರಕರಣದ ತನಿಖೆ ವೈಜ್ಞಾನಿಕವಾಗಿ ಮಾಡಬೇಕು ಅನ್ನೋದಿದೆ. ಯಾರೂ ದೇವಸ್ಥಾನಕ್ಕೆ ಹೋಗೋದು ತಪ್ಪಲ್ಲ. ಸಿಎಂ ಸೇರಿ ಎಲ್ಲರೂ ಹೋಗ್ತಾರೆ. ಹೋಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ತನಿಖೆ ಅನ್ನೋದು ವೈಜ್ಞಾನಿಕವಾಗಿರಬೇಕು ಎಂದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ 100 ವರ್ಷ ಆಗಿದೆ. ಆ ಕಾರಣಕ್ಕೆ ಆ ಕಾರ್ಯಕ್ರಮ ಮಾಡಲಾಗ್ತಿದೆ. ಇದಕ್ಕೆ ಯಾರ ವಿರೋಧವೂ ಇಲ್ಲ. ಯಾರು ಬೇಕಾದರೂ ಬರಬಹುದು ಎಂದು ಆಹ್ವಾನ ನೀಡಿದರು.
ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಮಹಾತ್ಮ ಗಾಂಧಿ ಅವರನ್ನು ಒಂದು ಪಕ್ಷದ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಚಲೋ ಕಾರ್ಯಕ್ರಮಕ್ಕೂ ಬಿಜೆಪಿ ಮುಂದಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


