ನವದೆಹಲಿ: ಇಂಡಿಯಾ ಒಕ್ಕೂಟದಲ್ಲಿ ಭಿನ್ನಮತ ಈಗ ತಾರಕಕ್ಕೇರಿದ್ದು ಕಾಂಗ್ರೆಸ್ ವಿರುದ್ಧ ಆಪ್ ಬಂಡಾಯದ ಬಾವುಟ ಹಾರಿಸಿದೆ.
ಆಪ್ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಯಿಂದ ಆಪ್ ಕೆಂಡವಾಗಿದ್ದು ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಛಾಟನೆ ಮಾಡುವಂತೆ ಇತರ ಪಕ್ಷಗಳ ಜೊತೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲು ಅರವಿಂದ್ ಕೇಜ್ರಿವಾಲ್ ಕಾರಣ. 2013 ರಲ್ಲಿ ಆಪ್ನ 40 ದಿನಗಳ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ದೆಹಲಿಯಲ್ಲಿ ದುರ್ಬಲವಾಗಿದೆ ಎಂದು ಅಜಯ್ ಮಾಕೇನ್ ಡಿ.25 ಎಂದು ಹೇಳಿಕೆ ನೀಡಿದ್ದರು.
ಅಜಯ್ ಮಾಕೆನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆಪ್ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಉಚ್ಚಾಟನೆಗೆ ಬೇಡಿಕೆ ಇಟ್ಟಿದೆ. ಈ ವಿಚಾರದ ಬಗ್ಗೆ ಇಂದು ಅಧಿಕೃತವಾಗಿ ಆಪ್ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆಯ ಬಳಿಕ ಆಪ್ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟ ಜೋರಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ಕಾಂಗ್ರೆಸ್ ನ ಕ್ರಮಗಳು ಇಂಡಿಯಾ ಮೈತ್ರಿಕೂಟದ ಏಕತೆಗೆ ಹಾನಿ ಮಾಡುತ್ತಿವೆ ಎಂದು ಆರೋಪಿಸಿದರು.
“ಹರಿಯಾಣ ಚುನಾವಣೆಯ ಸಂದರ್ಭದಲ್ಲಿ ನಾವು ಕಾಂಗ್ರೆಸ್ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಆದರೂ ಕಾಂಗ್ರೆಸ್ ಬಿಜೆಪಿಯ ಸ್ಕ್ರಿಪ್ಟ್ ಅನ್ನು ಓದುತ್ತಿದೆ ಎಂದು ತೋರುತ್ತಿದೆ. ಅದರ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕಚೇರಿಯಲ್ಲಿ ಅಂತಿಮಗೊಳಿಸಲಾಗಿದೆ” ಎಂದು ಸಿಂಗ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಾದ ಅಜಯ್ ಮಾಕೆನ್ ಮತ್ತು ಸಂದೀಪ್ ದೀಕ್ಷಿತ್ ಅವರು ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಕೇಂದ್ರೀಕರಿಸುವ ಬದಲು ಎಎಪಿಯನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದರು.
“ಅಜಯ್ ಮಾಕನ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ದೇಶವಿರೋಧಿ ಎಂದು ಕರೆಯುವ ಮೂಲಕ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರೂ ಕೇಜ್ರಿವಾಲ್ ಈಗ ಎಫ್ಐಆರ್ ಎದುರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಯಾವುದೇ ಬಿಜೆಪಿ ನಾಯಕರ ವಿರುದ್ಧ ಒಂದೇ ಒಂದು ಎಫ್ಐಆರ್ ದಾಖಲಿಸಿಲ್ಲ” ಎಂದು ಸಿಂಗ್ ಹೇಳಿದರು.
ಕಾಂಗ್ರೆಸ್ ಸಕ್ರಿಯವಾಗಿ ಎಎಪಿಯನ್ನು ದುರ್ಬಲಗೊಳಿಸುತ್ತಿದೆ. “ಕಾಂಗ್ರೆಸ್ ಅಭ್ಯರ್ಥಿಗಳಾದ ಸಂದೀಪ್ ದೀಕ್ಷಿತ್ ಮತ್ತು ಫರ್ಹಾದ್ ಸೂರಿ ಬಿಜೆಪಿಯಿಂದ ಬೆಂಬಲ ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಒಪ್ಪಂದವು ಇಂಡಿಯಾ ಮೈತ್ರಿಗೆ ಕಾಂಗ್ರೆಸ್ನ ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ” ಎಂದು ದೆಹಲಿ ಸಿಎಂ ಅತಿಶಿ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


