ಬೆಂಗಳೂರು: ಸಚಿವ ಸಂಪುಟದಿಂದ ಉಚ್ಛಾಟನೆಗೊಂಡಿರುವ ಕೆ.ಎನ್. ರಾಜಣ್ಣ ಅವರ ಪರವಾಗಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ನಾನಾ ರೀತಿಯ ಹೋರಾಟ ನಡೆಸಲು ಅಭಿಮಾನಿಗಳು ಮುಂದಾಗಿದ್ದಾರೆ.
ಆರ್ಎಸ್ಎಸ್ ಗೀತೆ ಹಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷಮೆ ನೀಡಿದಂತೆ ಕೆ.ಎನ್. ರಾಜಣ್ಣ ಅವರಿಗೂ ಅವಕಾಶ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಕೆ.ಎನ್.ರಾಜಣ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಅವರ ವಿರುದ್ಧ ಯಾವತ್ತೂ ಮಾತನಾಡಿಲ್ಲ. ಅಧಿಕಾರಿಗಳಿಂದ ಲೋಪವಾಗಿದೆ ಎಂದಿದ್ದಾರೆ. ಅದನ್ನು ತಪ್ಪಾಗಿ ಬಿಂಬಿಸಿ ರಾಜಣ್ಣ ಅವರಿಗೆ ರಾಜಕೀಯವಾಗಿ ತೊಂದರೆ ಮಾಡಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕೆಂದು ರಾಜಣ್ಣನ ಬೆಂಬಲಿಗರು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಸಂಬಂಧ ಪಟ್ಟಂತೆ ಈಗಾಗಲೇ ಒಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಕ್ರಮಗಳ ಬಗ್ಗೆ ಮತ್ತೆರಡು ಸಭೆಗಳನ್ನು ಆಯೋಜಿಸಿ ಚರ್ಚಿಸುವುದಾಗಿ ಬೆಂಬಲಿಗರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯೊಂದರಿಂದಲೇ 8 ರಿಂದ 10ಸಾವಿರ ಮಂದಿ ದೆಹಲಿಗೆ ತೆರಳಲಿದ್ದಾರೆ. ಇತರ ಜಿಲ್ಲೆಗಳಿಂದಲೂ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುವುದಾಗಿ ಹೇಳಲಾಗುತ್ತಿದೆ. ಆದರೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಸಂಬಂಧಪಟ್ಟಂತೆ ಚರ್ಚೆಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು.
ರಾಜಣ್ಣ ಹಿಂದುಳಿದ ವರ್ಗಗಳ ನಾಯಕ. ಅವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಹಿಂದುಳಿದ ವರ್ಗಗಳನ್ನೇ ನಿರಾಕರಿಸಿದಂತಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಹೈಕಮಾಂಡ್ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿದೆ. ಹೈಕಮಾಂಡ್ ನಾಯಕರ ಕಣ್ಣು ತೆರೆಸುವ ಸಲುವಾಗಿ ದೆಹಲಿಯಲ್ಲಿ ಪ್ರತಿಭಟನೆ ಹಮಿಕೊಳ್ಳಲಾಗಿದೆ. ಧರಣಿ, ಸತ್ಯಾಗ್ರಹ, ಅರಬೆತ್ತಲೆ ಮೆರವಣಿಗೆ ಸೇರಿದಂತೆ ಎಲ್ಲಾ ಮಾದರಿಯ ಹೋರಾಟಗಳನ್ನು ನಾವು ನಡೆಸುತ್ತೇವೆ ಎಂದಿದ್ದಾರೆ.
ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕು. ಇದು ನಮ ಮೂಲ ಉದ್ದೇಶ. ರಾಜಣ್ಣ ಅವರು ಹೈಕಮಾಂಡ್ ವಿರುದ್ಧ ಯಾವುದೇ ಮಾತುಗಳನ್ನಾಡಿಲ್ಲ. ಅವರ ವಿರುದ್ಧ ಅನಗತ್ಯವಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಿಂದ ವಜಾಗೊಂಡ ಬಳಿಕ ರಾಜಣ್ಣ ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರ ಮನವೊಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಜಣ್ಣ ಅವರ ಬದಲು ಅವರ ಬೆಂಬಲಿಗರು ದೆಹಲಿಗೆ ತೆರಳಿ ಪ್ರತಿಭಟನೆಗೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.
ವಿರೋಧದ ನಡುವೆಯೇ ಸಾಹಿತಿ ಬಾನು ಮುಷ್ತಾಕ್ ಅವರಿಗೆ ದಸರಾ ಆಹ್ವಾನ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


