ಮೊನ್ನೆ ( ಮಾರ್ಚ್ 28 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್ಗಳ ಅಂತರದ ಗೆಲುವನ್ನು ದಾಖಲಿಸಿತು.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 17 ವರ್ಷಗಳ ಬಳಿಕ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯವನ್ನು ಸೋತು ಗೆಲುವಿನ ನಾಗಾಲೋಟವನ್ನು ನಿಲ್ಲಿಸಿದೆ. ಇನ್ನು ಈ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಲ್ಲಾ ವಿಭಾಗಗಳಲ್ಲಿಯೂ ಮಕಾಡೆ ಮಲಗಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೀನಾಯ ಸೋಲಿಗೆ ತಂಡದಲ್ಲಿನ ಹಲವಾರು ತಪ್ಪುಗಳು ಕಾರಣವಾಗಿದ್ದು, ಈ ಕೆಳಕಂಡ 5 ಬದಲಾವಣೆಗಳಾದರೆ ಸಿಎಸ್ಕೆ ತಂಡ ಸದ್ಯ ಇರುವ ಸಮಸ್ಯೆಗಳಿಂದ ಪಾರಾಗಿ ಸುಧಾರಿಸಲಿದೆ.
1. ರಾಹುಲ್ ತ್ರಿಪಾಠಿಯನ್ನು ತಂಡದಿಂದ ಹೊರಗಿಡಬೇಕು: ರಾಹುಲ್ ತ್ರಿಪಾಠಿ ಒಬ್ಬ ಒಳ್ಳೆಯ ಆರಂಭಿಕ ಆಟಗಾರ. ಆದರೆ ತ್ರಿಪಾಠಿ ಸದ್ಯ ಹೊಂದಿರುವ ಫಾರ್ಮ್ ನೋಡಿದರೆ ಅವರಿಂದ ಒಳ್ಳೆಯ ಆಟವನ್ನು ನಿರೀಕ್ಷಿಸುವುದು ಕಷ್ಟ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 3 ಎಸೆತಗಳಲ್ಲಿ 2 ರನ್ ಹಾಗೂ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ 7 ರನ್ ಗಳಿಸಿದ ತ್ರಿಪಾಠಿ ಫ್ಲಾಪ್ ಆಗಿದ್ದಾರೆ. ಸಿಎಸ್ಕೆ ತಂಡದಲ್ಲಿ ಇನ್ನಿಂಗ್ಸ್ ಓಪನ್ ಮಾಡಬಲ್ಲ ಆಟಗಾರರಿದ್ದು, ಒಂದೆರಡು ಪಂದ್ಯಗಳಲ್ಲಿ ರಾಹುಲ್ ತ್ರಿಪಾಠಿಯನ್ನು ಹೊರಗಿಟ್ಟು ಬೇರೆ ಆಟಗಾರರನ್ನು ಆಡಿಸುವುದು ಉತ್ತಮ.
2. ಸ್ಯಾಮ್ ಕರನ್ ಕೈಬಿಟ್ಟು ಕಾನ್ವೆಯನ್ನು ತರಬೇಕು: ಸ್ಯಾಮ್ ಕರನ್ ಸಿಎಸ್ಕೆಯ ಆಲ್ರೌಂಡರ್ ಅಸ್ತ್ರಗಳಲ್ಲಿ ಓರ್ವರು. ಆದರೆ ಸ್ಯಾಮ್ ಕರನ್ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಅನ್ನೂ ಪಡೆದಿಲ್ಲ ಹಾಗೂ ರನ್ ಗಳಿಕೆಯಲ್ಲೂ ಸಹ ಮಕಾಡೆ ಮಲಗಿದ್ದಾರೆ. ಹೀಗೆ ಫ್ಲಾಪ್ ಆಗಿರುವ ಸ್ಯಾಮ್ ಕರನ್ ಬದಲು ಬ್ಯಾಟಿಂಗ್ನಲ್ಲಿ ಉಪಯೋಗಕ್ಕೆ ಬರುವ ಡಿವಾನ್ ಕಾನ್ವೆಯನ್ನು ಕಣಕ್ಕಿಳಿಸುವುದು ಉತ್ತಮ ಆಯ್ಕೆ.
3. ಮುಕೇಶ್ ಚೌಧರಿ ಬಳಕೆ: ಹೇಗೂ ಸ್ಯಾಮ್ ಕರನ್ ವಿಕೆಟ್ ಪಡೆಯದ ಕಾರಣ ಅವರನ್ನು ಡ್ರಾಪ್ ಮಾಡಿ ಡಿವಾನ್ ಕಾನ್ವೆಯನ್ನು ಬಳಸಿದರೆ, ಬೌಲಿಂಗ್ನಲ್ಲಿ ವಿಕೆಟ್ ಪಡೆಯಬಲ್ಲ ಸಾಮರ್ಥ್ಯವಿರುವ ಮುಕೇಶ್ ಚೌಧರಿಯನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಕೆ ಮಾಡಿಕೊಳ್ಳಬಹುದು.
4. ದೀಪಕ್ ಹೂಡಾ ಬದಲು ವಿಜಯ್ ಶಂಕರ್: ರಾಹುಲ್ ತ್ರಿಪಾಠಿ ಹಾಗೂ ಸ್ಯಾಮ್ ಕರನ್ ರೀತಿ ದೀಪಕ್ ಹೂಡಾ ಸಹ ಈ ಬಾರಿಯ ಟೂರ್ನಿಯಲ್ಲಿ ನೆಲಕಚ್ಚಿದ್ದಾರೆ. ಮುಂಬೈ ವಿರುದ್ಧ 5 ಎಸೆತಕ್ಕೆ 3 ಹಾಗೂ ಆರ್ಸಿಬಿ ವಿರುದ್ಧ 14 ಎಸೆತಗಳಿಗೆ 7 ರನ್ ಗಳಿಸಿದ್ದಾರೆ. ಹೀಗಾಗಿ ದೀಪಕ್ ಹೂಡಾ ಅವರನ್ನು ತಂಡದಿಂದ ಹೊರಗಿಟ್ಟು ಚೆಪಾಕ್ನಲ್ಲಿ ಆಡಿ ಅಭ್ಯಾಸ ಹೊಂದಿರುವ ವಿಜಯ್ ಶಂಕರ್ಗೆ ಅವಕಾಶ ಕೊಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಉಪಯೋಗವಾಗಲಿದ್ದಾರೆ.
5. ಎಂಎಸ್ ಧೋನಿಯನ್ನು ಬೇಗ ಕಣಕ್ಕಿಳಿಸಬೇಕು: ಫಿನಿಷರ್ ಎಂದೇ ಖ್ಯಾತಿಯನ್ನು ಹೊಂದಿರುವ ಎಂಎಸ್ ಧೋನಿ ಅವರನ್ನು ಆರ್ಸಿಬಿ ಪಂದ್ಯದ ರೀತಿ ತಡವಾಗಿ ಕಣಕ್ಕಿಳಿಸದೇ 14ನೇ ಓವರ್ ಸಮಯಕ್ಕೆ ಕಣಕ್ಕಿಳಿಸುವುದು ಉತ್ತಮ. ಡೆತ್ ಓವರ್ಗಳಲ್ಲಿ ಒಳ್ಳೆಯ ಸ್ಟ್ರೈಕ್ ರೇಟ್ ಹೊಂದಿರುವ ಧೋನಿಗೆ ಇದು ಅಗತ್ಯವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


