ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸಿದ ಪ್ರತ್ಯೇಕ ಮಾತುಕತೆಯಲ್ಲಿ ಕೋಲಾರ ಜಿಲ್ಲೆಯ ಗುಂಪುಗಾರಿಕೆ ಹಾಗೂ ದ್ವೇಷದ ರಾಜಕೀಯದ ಬಗ್ಗೆ ದೂರುಗಳ ಸುರಿಮಳೆಯಾಗಿದೆ.
ಕೆಜಿಎಫ್ನ ಶಾಸಕಿ ರೂಪಕಲಾ ಜಿಲ್ಲೆಯಲ್ಲಿರುವ ದ್ವೇಷ, ಅಸೂಯೆ ಹಾಗೂ ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸುರ್ಜೇವಾಲ ಅವರಲ್ಲಿ ಮನವಿ ಮಾಡಿದ್ದಾರೆ.
ಪಕ್ಷವನ್ನು ನಾವು ತಾಯಿ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದೇವೆ. ಆದರೆ ಕೆಲವರ ಸ್ವಾರ್ಥಕ್ಕಾಗಿ ತಮ ಕಣ್ಣಮುಂದೆಯೇ ಸಂಘಟನೆ ಕುಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ರಮೇಶ್ಕುಮಾರ್ ಹಾಗೂ ಅವರ ಬೆಂಬಲಿಗರು ಗುಂಪುಗಾರಿಕೆ ನಡೆಸಿದ್ದು, ಪಕ್ಷನಿಷ್ಠರನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸುತ್ತಿಲ್ಲ ಎಂದು ಬಂಗಾರಪೇಟೆ ಕ್ಷೇತ್ರದ ಎಸ್.ಎ.ನಾರಾಯಣಸ್ವಾಮಿ, ರೂಪಕಲಾ ಸೇರಿದಂತೆ ಹಲವಾರು ಮಂದಿ ದೂರಿದ್ದಾರೆ.
ಸಚಿವ ಭೈರತಿ ಸುರೇಶ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಶಾಸಕರ ಜೊತೆ ಸಮಾಲೋಚನೆ ನಡೆಸುತ್ತಿಲ್ಲ. ಸರ್ಕಾರದ ನೇಮಕಾತಿಗಳ ವಿಚಾರದಲ್ಲಿ ಅನುದಾನ ನೀಡಿಕೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಮಾಲೋಚನೆ ಆಗುತ್ತಿಲ್ಲ ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೋಲಾರ ಕ್ಷೇತ್ರದ ಶಾಸಕ ಕೊತ್ತನೂರು ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವರು ಕರೆಯುವ ಸಭೆಗಳಿಗೆ ಶಾಸಕರು ಹಾಜರಾಗುತ್ತಿಲ್ಲ. ಕೆಡಿಪಿ ಸಭೆಗಳಿಗೂ ಬರುತ್ತಿಲ್ಲ. ಪ್ರತ್ಯೇಕ ಬಣ ರಾಜಕೀಯ ಮಾಡುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತಪಡಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲದಕ್ಕೂ ಸ್ಪಂದಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ನ ಬಿಆರ್ ಪಾಟೀಲ್, ರಾಜು ಕಾಗೆಗೆ 20 ಪ್ರಶ್ನೆ ಹಾಕಿದ ಸುರ್ಜೇವಾಲ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


