70ನೇ ಕನ್ನಡ ರಾಜ್ಯೋತ್ಸವವನ್ನು ಮೊನ್ನೆ ತಾನೇ ಆಚರಣೆ ಮಾಡಿದ್ದೇವೆ. ನವೆಂಬರ್ ಪೂರ್ತಿ ಕನ್ನಡ ನಾಡಿನಲ್ಲಿ ಕನ್ನಡ ಡಿಂಡಿಮ. ನಮ್ಮ ಉಸಿರು ಕನ್ನಡ, ನಮ್ಮ ಹೆಸರು ಕನ್ನಡ.
ಆದರೆ ಕರ್ನಾಟಕದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಬೇರೆ ಭಾಷೆ ಮಾತನಾಡುವ ಜನರೇ ಹೆಚ್ಚಾಗಿ ಸಿಗುತ್ತಾರೆ. ಕನ್ನಡ್ ಗೊತ್ತಿಲ್ಲ ಎಂಬುವವರು, ಕ್ಯಾ ಚಾಯಿಯೇ ಎನ್ನುವವರು ಬೀದಿ ಬೀದಿಗಳಲ್ಲಿ ಸಿಗುತ್ತಾರೆ.
ಸಾಂಸ್ಕೃತಿಕ ನಗರಿ, ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖ ತಾಣ ಮೈಸೂರು. ಆದರೆ ಈಗ ಮೈಸೂರು ಸಹ ಬೆಂಗಳೂರು ರೀತಿಯೇ ಆಗುತ್ತಿದೆ. ಇದು ಟ್ರಾಫಿಕ್, ಜನದಟ್ಟಣೆ ವಿಚಾರದಲ್ಲಿ ಅಲ್ಲ. ಕನ್ನಡದ ವಿಚಾರದಲ್ಲಿ.
ಸಾಮಾಜಿಕ ಜಾಲತಾಣದಲ್ಲಿ ಯುವತಿ ಹಾಕಿರುವ ವಿಡಿಯೋವೊಂದು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಫುಲ್ ವೈರಲ್ ಆಗಿದೆ. “ಪಕ್ಕಾ ಮೈಸೂರು ಬೆಂಗಳೂರು ಆಗುತ್ತದೆ” ಎಂದು ಯುವತಿ ಹೇಳಿದ್ದಾರೆ.
27 ಸೆಕೆಂಡ್ಗಳ ವಿಡಿಯೋ ಮೈಸೂರಿನಲ್ಲಿ ಹೇಗೆ ಪರಭಾಷಿಕರು ತುಂಬಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ. ಕನ್ನಡ್ ಗೊತ್ತಿಲ್ಲ ಎಂಬುವವರು ಮೈಸೂರಿನಲ್ಲಿಯೂ ಇದ್ದಾರೆ ಎಂದು ಯುವತಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ವಿಡಿಯೋದಲ್ಲಿ ಹೇಳಿದ್ದೇನು?: ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ, “ಯಾಕೋ ಮೈಸೂರು ಬೆಂಗಳೂರು ಥರ ಆಗುವ ಹಾಗೆ ಇದೆ. ಎಲ್ಲಿ ಹೋದ್ರು ಜನರು ಹಿಂದಿಯಲ್ಲಿ ಮಾತನಾಡೋಕೆ ಶುರು ಮಾಡಿದ್ದಾರೆ. ನಾನು ಈವಾಗ ಪ್ಯಾಲೇಸ್ಗೆ ಹೋಗಿ ಬಂದೆ, ಅಲ್ಲಿ ಮೇಡಂ ಆಪ್ ಏ ಲೇಲೋ ಅಂತಾರೆ” ಎಂದು ಹೇಳಿದ್ದಾರೆ.
“ಅಲ್ಲಿಂದ ಟೀ ಅಂಗಡಿಗೆ ಹೋಗ್ತಿನಿ. ದೀದಿ ಕ್ಯಾ ಚಾಯಿಯೇ ಆಪ್ಕೋ? ಎನ್ನುತ್ತಾರೆ. ಮುಂದೆ ಪಕ್ಕಾ ಮೈಸೂರು ಬೆಂಗಳೂರು ಥರ ಆಗೋಗತ್ತೆ. ನಾವು ಏ ಕನ್ನಡದಲ್ಲಿ ಮಾತಾಡು ಅಂತೀವಿ. ಅವರು ಕನ್ನಡ್ ಮುಜೇ ನಹೀ ಆತೀ ಅಂತಾರೆ” ಎಂದು ಯುವತಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಕೇವಲ 27 ಸೆಕೆಂಡ್ಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬೆಂಗಳೂರು ರಸ್ತೆಗಳು ಖಾಲಿ ಇದ್ದಾಗ ‘ಹ್ಯಾಪಿ ದಿವಾಳಿ’ ಎನ್ನುವವರು ಇಲ್ಲದೇ ‘ದೀಪಾವಳಿ’ ಮಾಡುವವರು ಮಾತ್ರ ಇದ್ದಾರೆ ಎಂದು ಬೆಂಗಳೂರಿನಲ್ಲಿ ಪರಭಾಷಿಕರು ಎಷ್ಟಿದ್ದಾರೆ ಎಂದು ಹಲವು ಜನರು ವಿಡಿಯೋ ಮಾಡಿದ್ದರು.
ಈಗ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಪರಭಾಷಿಕರ ಹಾವಳಿ ಕುರಿತು ಯುವತಿ ಮಾಡಿರುವ ವಿಡಿಯೋವನ್ನು ಹಲವಾರು ಜನರು ಹಂಚಿಕೊಳ್ಳುತ್ತಿದ್ದಾರೆ. ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಓದು, ಉದ್ಯೋಗ ಎಂದು ಬೇರೆ ಬೇರೆ ರಾಜ್ಯದವರು ಅವಕಾಶ ಹುಡುಕಿಕೊಂಡು ಈ ನೆಲಕ್ಕೆ ಬರಲಿ ಸಮಸ್ಯೆ ಇಲ್ಲ. ಆದರೆ ಇಲ್ಲಿ ಕನ್ನಡ ಕಲಿತು ಕನ್ನಡಿಗರ ಜೊತೆ ಹೊಂದಿಕೊಂಡು ಹೋಗಬೇಕು. ಅದು ಬಿಟ್ಟು ಕನ್ನಡಿಗರ ಮೇಲೆ ದರ್ಪ ತೋರಿಸಿದರೆ ಕನ್ನಡಿರು ಸಹಿಸಿಕೊಳ್ಳುವುದಿಲ್ಲ.
ಮಂಗಳವಾರ ಬಿಹಾರ ಚುನಾವಣೆ ಬಗ್ಗೆ ಕರ್ನಾಟಕದಲ್ಲಿ ಚರ್ಚೆ ಆಗುತ್ತಿತ್ತು. ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿರುವ ಬಿಹಾರದ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಬೇಕು ಎಂಬುದು ಮನವಿ ಸಲ್ಲಿಸಿದ್ದು, ಚರ್ಚೆಯ ವಿಚಾರವಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


