ಮೈಥಿಲಿ ಠಾಕೂರ್ 2025ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಬಿಜೆಪಿ ನಾಯಕಿ. 25 ವರ್ಷದ ಯುವ ಗಾಯಕಿ ಬಿಜೆಪಿ ಟಿಕೆಟ್ ಪಡೆದು, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗಾಯಕಿಯೂ ಆಗಿರುವ ಮೈಥಿಲಿ ಠಾಕೂರ್ ಈಗ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಮೊದಲ ಬಾರಿಗೆ ಕನ್ನಡ ಹಾಡು ಹಾಡಿರುವ ಮೈಥಿಲಿ ಠಾಕೂರ್ ಹಾಡು ಕೇಳಿ ಕನ್ನಡಿಗರು ಸಂತಸಗೊಂಡಿದ್ದಾರೆ. ರಾಮ ನಾಮವೆಂಬೋ ನಾಮವನೆನೆದರೆ ಎಂದು ಹಾಡಿರುವ ಮೈಥಿಲಿ ಠಾಕೂರ್ ಹಾಡಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಥಿಲಿ ಠಾಕೂರ್ ಗೋಕರ್ಣದ ಪರ್ತಗಾಳಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ ನಾಮವೆಂಬೋ ನಾಮವನೆನೆದರೆ ಎಂದು ಕನ್ನಡ ಹಾಡನ್ನು ಹಾಡಿದ್ದಾರೆ. ಈ ಹಾಡಿನ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿಯೂ ಶೇರ್ ಮಾಡಿಕೊಂಡಿದ್ದು, ಅದನ್ನು ಸಾವಿರಾರು ಜನರು ಮೆಚ್ಚಿದ್ದಾರೆ.
ರಾಮ ನಾಮವೆಂಬೋ ನಾಮವನೆನೆದರೆ ಹಾಡನ್ನು ಆರಂಭಿಸುವ ಮೊದಲೇ ಮೈಥಿಲಿ ಠಾಕೂರ್ ಇದೊಂದೇ ಹಾಡು ಬರುತ್ತದೆ, ಮುಂದಿನ ಭಾರಿ ಬರುವಾಗ ಇನ್ನಷ್ಟು ಹಾಡು ಕಲಿತಿರುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಸುಶ್ರಾವ್ಯವಾಗಿ ರಾಮ ನಾಮವೆಂಬೋ ನಾಮವನೆನೆದರೆ ಎಂದು ಹಾಡಿದ್ದಾರೆ.
ಮೈಥಿಲಿ ಠಾಕೂರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ First time sang kannada bhajan to all my south ayodhya listeners ಎಂದು ಬರೆದು ಹಾಡನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ 1.2ಕೆ ಶೇರ್ ಆಗಿದ್ದು, 936 ಕಮೆಂಟ್ಗಳು ಬಂದಿವೆ. 43ಕೆ ಜನರು ಲೈಕ್ ಮಾಡಿದ್ದಾರೆ.
ವೈರಲ್ ಆಗಿರುವ ಮೈಥಿಲಿ ಠಾಕೂರ್ ಕನ್ನಡ ಹಾಡಿನ ಪೋಸ್ಟ್
ನವೆಂಬರ್ 28ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಲಿ ಜೀವೋತ್ತಮ ಮಠದ 550ನೇ ವರ್ಷದ ಸಂಭ್ರಮಾಚರಣೆಯ ‘ಸಾರ್ಧ ಪಂಚಶತಮಾನೋತ್ಸವ’ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೋವಾದ ಕಣಕೋನಾದಲ್ಲಿರುವ ಮಠಕ್ಕೆ ಭೇಟಿ ನೀಡಿದ್ದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಲಿಯ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಪ್ರಭು ಶ್ರೀ ರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಮಂತ್ರಿಗಳು ಅನಾವರಣಗೊಳಿಸಿದ್ದರು. ಮಠವು ಅಭಿವೃದ್ಧಿಪಡಿಸಿರುವ ‘ರಾಮಾಯಣ ಥೀಮ್ ಪಾರ್ಕ್’ ಉದ್ಯಾನವನವನ್ನು ಉದ್ಘಾಟಿಸಿದ್ದರು.
ಈ ಕಾರ್ಯಕ್ರಮದ ಬಳಿಕ ಮಠದಲ್ಲಿ ಹಲವಾರು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕಿ, ಗಾಯಕಿ ಮೈಥಿಲಿ ಠಾಕೂರ್ ಭಜನೆಯನ್ನು ಆಯೋಜಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ವಿವಿಧ ಭಾಷೆಯ ಭಜನೆಗಳನ್ನು ಮೈಥಿಲಿ ಹಾಡಿದ್ದರು. ಆಗ ಕನ್ನಡದ ರಾಮ ನಾಮವೆಂಬೋ ನಾಮವನೆನೆದರೆ ಎಂಬ ಹಾಡನ್ನು ಅವರು ಹಾಡಿದ್ದಾರೆ.
ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್: ಮೈಥಿಲಿ ಠಾಕೂರ್ ಮೂಲತಃ ಗಾಯಕಿ. ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ವೇಳೆ ಅವರು ಹಾಡಿದ ಭಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸಹ ಮೆಚ್ಚಿದ್ದರು. ಬಿಹಾರ ವಿಧಾನಸಭೆ ಚುನಾವಣೆ 2025ರ ಸಂದರ್ಭದಲ್ಲಿ ಅವರು ಬಿಜೆಪಿ ಸೇರಿದ್ದರು. ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಹ ನೀಡಿತ್ತು.
ಅಲಿ ನಗರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಚುನಾವಣೆಯಲ್ಲಿ 84,915 ಮತಗಳನ್ನು ಪಡೆದು 11,730 ಮತಗಳ ಅಂತರದಿಂದ ಆರ್ಜೆಡಿ ಪಕ್ಷದ ಬಿನೋದ್ ಮಿಶ್ರಾ ಸೋಲಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಚುನಾವಣೆಯಲ್ಲಿಯೇ ಜಯಗಳಿಸುವ ಮೂಲಕ ಬಿಹಾರ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ಮೈಥಿಲಿ ಠಾಕೂರ್ ಬಿಹಾರ ವಿಧಾನಸಭೆಗೆ ಆಯ್ಕೆಯಾದ ಅತಿ ಕಿರಿಯ ಶಾಸಕಿಯಾಗಿದ್ದಾರೆ. ಅಲಿ ನಗರ್ ಹೆಸರನ್ನು ‘ಸೀತಾ ನಗರ್’ ಎಂದು ಮರು ನಾಮಕರಣ ಮಾಡುತ್ತೇನೆ ಎಂದು ಮೈಥಿಲಿ ಚುನಾವಣಾ ಪ್ರಚಾರವನ್ನು ನಡೆಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


