ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ಕೊತ್ತಲವಾಡಿ ಇದೇ ಆಗಸ್ಟ್ 1ರಂದು ಬಿಡುಗಡೆಯಾಗಿತ್ತು. ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಇದೀಗ ಸದ್ದಿಲ್ಲದೇ ಒಟಿಟಿಗೂ ಸಹ ಬಂದಿದೆ.
ಚಿತ್ರ ತನ್ನ ಟ್ರೈಲರ್ ಹಾಗೂ ಹಾಡುಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಸಂದರ್ಶನಗಳಿಂದಲೇ. ಆರಂಭದಲ್ಲಿ ನೇರ ಉತ್ತರಗಳ ಮೂಲಕ ವೈರಲ್ ಆಗಿದ್ದ ಪುಷ್ಪ ಬಳಿಕ ಅದೇ ಹೇಳಿಕೆಗಳು ಅತಿಯಾದಾಗ ವಿರೋಧವನ್ನೂ ಸಹ ಎದುರಿಸಿದರು.
ಹೀಗೆ ಮೊದಲ ನಿರ್ಮಾಣದಲ್ಲಿಯೇ ಸಾಮಾಜಿಕ ಜಾಲತಾಣದಲ್ಲೀ ಭಾರೀ ಚರ್ಚೆಗೀಡಾದ ಯಶ್ ತಾಯಿ ವಿರುದ್ಧ ಇದೀಗ ಸಂಭಾವನೆ ಕೊಡದ ಗಂಭೀರ ಆರೋಪ ಕೇಳಿಬಂದಿದೆ. ಮಹೇಶ್ ಗುರು ಎಂಬ ರಂಗಭೂಮಿ ಕಲಾವಿದ ಕೊತ್ತಲವಾಡಿ ಚಿತ್ರದಲ್ಲಿ ಸಹ ನಟನಾಗಿ ನಟಿಸಿದ್ದು, ನಿರ್ದೇಶಕರ ಕಡೆಯಿಂದ ಚಿತ್ರಕ್ಕೆ ಆಯ್ಕೆಯಾದೆ ಎಂದಿದ್ದಾರೆ.
ಮೊದಲಿಗೆ ಅಡ್ವಾನ್ಸ್ ಕೇಳಿದಾಗ ದುಡ್ಡು ಕೊಡಲಿಲ್ಲ, ಮುಹೂರ್ತದ ಸಮಯದಲ್ಲಿ ಕೇಳಿದರೂ ನಿರ್ಮಾಣ ಸಂಸ್ಥೆ ಇನ್ನೂ ಹಣ ಕೊಟ್ಟಿಲ್ಲ ಕೊಟ್ಟ ನಂತರ ಕೊಡುತ್ತೇನೆ ಎಂದು ನಿರ್ದೇಶಕ ಹೇಳಿದರಂತೆ. ಬಳಿಕ ಚಿತ್ರ ಬಿಡುಗಡೆಯೂ ಆಯಿತು, ಒಟಿಟಿಗೂ ಬಂತು. ಹಲವಾರು ಪ್ರಚಾರಗಳನ್ನು ಮಾಡಿದರೂ ತಮ್ಮನ್ನು ಕರೆದಿಲ್ಲ ಎಂದರು.
ಅಲ್ಲದೇ ತಮಗೆ ನಿರ್ಮಾಪಕರನ್ನು ಭೇಟಿಯಾಗುವುದಕ್ಕೂ ಸಹ ಅವಕಾಶವಿಲ್ಲ, ಅವರ ನಂಬರ್, ಅಡ್ರೆಸ್ ಏನೂ ಇಲ್ಲದ ಕಾರಣ ವಿಡಿಯೊ ಮೂಲಕ ತಮಗಾದ ಮೋಸವನ್ನು ಸರಿಪಡಿಸುವಂತೆ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ತನ್ನ ಹಣವನ್ನು ಕೊಡಿ ಎಂದು ಮಹೇಶ್ ಗುರು ಕೇಳಿಕೊಂಡಿದ್ದಾರೆ.
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


