ಬೆಂಗಳೂರು: ಪಾಕಿಸ್ತಾನ, ಮುಸಲ್ಮಾನ ವಿಷಯಗಳು ಇಲ್ಲವೆಂದರೆ ಬಿಜೆಪಿಯವರಿಗೆ ರಾಜಕೀಯ ವ್ಯವಹಾರವೇ ಇಲ್ಲ. ಈ ವಿಷಯಗಳೇ ಬಿಜೆಪಿಯವರಿಗೆ ಜೀವಾಳ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಾದಾಗ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಜೋರು ಭಾಷಣ ಮಾಡಿ, ನೀರು ಮತ್ತು ರಕ್ತ ಏಕಕಾಲಕ್ಕೆ ಹರಿಯಲು ಸಾಧ್ಯವಿಲ್ಲ ಎಂದಿದ್ದರು. ಈಗ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನು ಬಿಜೆಪಿಯವರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದ್ದರು.
ಬಿಜೆಪಿಯವರಿಗೆ ನಾಚಿಕೆ, ಮಾನಮರ್ಯಾದೆ ಏನೂ ಇಲ್ಲ. ಪಾಕಿಸ್ತಾನದ ಜೊತೆಗಿನ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿಬಿಡುತ್ತೇವೆ, ಪಾಕಿಸ್ತಾನವನ್ನು ಮುಗಿಸಿ ಬಿಡುತ್ತೇವೆ, ಹಾಗೇ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದೆಲ್ಲಾ ಹೇಳಿದವರು ಇವತ್ತು ಮಾಡುತ್ತಿರುವುದು ಏನು? ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಜೈ ಷಾ ಅವರ ಅಧ್ಯಕ್ಷತೆಯಲ್ಲಿರುವ ಭಾರತೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ಜೊತೆ ನಮ್ಮ ತಂಡ ಆಟವಾಡಲು ಅವಕಾಶ ನೀಡಿದೆ. ಇದನ್ನು ಯಾಕೆ ಬಿಜೆಪಿಯವರು ವಿರೋಧಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಏನೂ ಮಾಡಿದರೂ ಅದು ಅಂಗೀಕೃತ ಎಂಬಂತೆ ವರ್ತಿಸಲಾಗುತ್ತಿದೆ. ಕಾಂಗ್ರೆಸ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ಮುಸಲ್ಮಾನರು ಪಾಕಿಸ್ತಾನ ಎಂಬ ಹುಳುಕು ಹುಡುಕಿ ಟೀಕೆ ಮಾಡುತ್ತಾರೆ. ಇದೇ ಬಿಜೆಪಿಯವರ ಜೀವಾಳ. ಇದನ್ನು ಬಿಟ್ಟರೆ ಅವರಿಗೆ ಬದುಕಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.65ರಷ್ಟು ಬಿಪಿಎಲ್ ಕಾರ್ಡ್ಗಳು ಇರಬೇಕು. ಆದರೆ ನಮಲ್ಲಿ 90ಕ್ಕಿಂತಲೂ ಹೆಚ್ಚು ಬಿಪಿಎಲ್ ಕಾರ್ಡ್ಗಳಿವೆ. ಅರ್ಹರಿಗೆ ಬಿಪಿಎಲ್ ಸೌಲಭ್ಯ ದೊರಕಿಸಲು ಎಲ್ಲಾ ಸರ್ಕಾರಗಳು ಪ್ರಯತ್ನ ಮಾಡುತ್ತಲೇ ಇವೆ. ಅನರ್ಹರು ಸೌಲಭ್ಯ ಪಡೆದಿರುವುದನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಒಂದೆಡೆ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಹೆಚ್ಚಿದ್ದರೂ ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ. ತಲಾ ಆದಾಯದಲ್ಲೂ ದೇಶದಲ್ಲಿ ನಂ.1 ಸ್ಥಾನದಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆಯೂ ಮಹತ್ವದ್ದಾಗಿದೆ ಎಂದು ಹೇಳಿದರು.
ಮೃತಪಟ್ಟ ಮಹಿಳೆಯ ಖಾತೆಗೆ ಗೃಹಲಕ್ಷ್ಮಿಯೋಜನೆಯ ಹಣ ಪಾವತಿಯಾಗಿರುವುದು ಸಹಜ. ಇದು ದೊಡ್ಡ ಪ್ರಮಾಣದ ಯೋಜನೆ. ಸಣ್ಣ ಪ್ರಮಾಣದ ಲೋಪಗಳು ಇರಬಹುದು. ಪ್ರತಿವಾರ ಸಾವು-ನೋವುಗಳು ಘಟಿಸುತ್ತಿರುತ್ತವೆ. ಆ ಮಾಹಿತಿ ಕಾಲಕಾಲಕ್ಕೆ ಅಪ್ಡೇಟ್ ಆಗದೇ ಇದ್ದಾಗ ಲೋಪಗಳಾಗುವುದು ಸಾಮಾನ್ಯ. ಸರ್ಕಾರ ಇದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಧರ್ಮಸ್ಥಳ: ದೂರು ಕೊಟ್ಟರೂ ತನಿಖೆ ನಡೆಸದ ಎಸ್ಐಟಿ; ಹೈಕೋರ್ಟ್ ಮೆಟ್ಟಿಲೇರಿದ ಇಬ್ಬರು ದೂರುದಾರರು!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


