ಕೆಲ ದಿನಗಳ ಹಿಂದಷ್ಟೇ ಧರ್ಮಸ್ಥಳ ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ್ದ ವಿಡಿಯೊ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತ್ತು. ಇಷ್ಟು ದಿನಗಳ ಕಾಲ ಪ್ರಕರಣದಲ್ಲಿ ಕೇಳದೇ ಇದ್ದ ಹಲವಾರು ವಿಷಯಗಳನ್ನು ಸಮೀರ್ ಜನರಿಗೆ ತಲುಪಿಸುವ ಯತ್ನ ಮಾಡಿದರು ಹಾಗೂ ದೊಡ್ಡ ಮಟ್ಟದಲ್ಲಿ ಯಶಸ್ವಿ ಸಹ ಆದರು.
ಈ ವಿಡಿಯೊಗೆ ಧರ್ಮಸ್ಥಳ ಹಾರರ್ ಎಂದು ಹೆಸರಿಟ್ಟಿದ್ದ ಸಮೀರ್ ಬೃಹತ್ ಪ್ರಮಾಣದ ಬೆಂಬಲದ ಜೊತೆ ತುಸು ವಿರೋಧವನ್ನೂ ಸಹ ಎದುರಿಸಿದರು. ಆದರೆ ಸಮೀರ್ ತಿಳಿಸಿದ್ದ ವಿಷಯಗಳ ಮುಂದೆ ವಿರೋಧಿಗಳ ಯಾವುದೇ ವಿಡಿಯೊಗಳೂ ಸಹ ಪ್ರಭಾವ ಬೀರಲಿಲ್ಲ.
ಇನ್ನು ಮೊದಲ ವಿಡಿಯೊದಲ್ಲಿ ಸೌಜನ್ಯ ಪ್ರಕಣದಲ್ಲಿ ಸಂತೋಷ್ ರಾವ್ ಅವರನ್ನು ಹೇಗೆ ಸಿಲುಕಿಸಲಾಯಿತು ಹಾಗೂ ಯಾವ ರೀತಿ ಪ್ರಕರಣದ ದಿಕ್ಕು ತಪ್ಪಿಸಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದ ಸಮೀರ್ ಇದೀಗ ಎರಡನೇ ವಿಡಿಯೊ ಹಂಚಿಕೊಂಡಿದ್ದು, ಈ ಬಾರಿ ಪ್ರಕರಣವನ್ನು ಕಣ್ಣಾರೆ ಕಂಡ ಹಾಗೂ ತಡೆಯಲು ಬಂದ ಹಲವರು ಹೆಣವಾಗಿಹೋದರು ಎಂಬುದನ್ನು ತಿಳಿಸಿದ್ದಾರೆ.
ಹೀಗೆ ಸಾಕ್ಷಿ ನಾಶಗಳ ಕುರಿತು ಮಾತನಾಡಿರುವ ಸಮೀರ್ ಪೊಲೀಸರು ಸಾಕ್ಷಿಗಳನ್ನು ಹೇಗೆ ಹುಟ್ಟುಹಾಕಿದರು ಎಂಬುದನ್ನೂ ಸಹ ಬಹಿರಂಗಪಡಿಸಿದ್ದಾರೆ. ಸೌಜನ್ಯ ಕಾಣೆಯಾದ ದಿನ ಮನೆಯವರು ಹಾಗೂ ಗ್ರಾಮಸ್ಥರು ಹುಡುಕಲಾರಂಭಿಸಿದ್ದರು. ಆದರೆ ಮಳೆ ಕಾರಣ ಹುಡುಕಾಟ ನಿಲ್ಲಿಸಿ ಬೆಳಗ್ಗೆ ಹುಡುಕಲು ತೀರ್ಮಾನಿಸಿದ್ದರು. ಬಳಿಕ ಮಾರನೇ ದಿನ ಸೌಜನ್ಯ ಶವ ಸಿಕ್ಕಿತ್ತು. ಆದರೆ ಆಕೆ ಬಳಿ ಬಿದ್ದಿದ್ದ ಬ್ಯಾಗ್ ಆಗಲಿ ಹಾಗೂ ಅದರಲ್ಲಿನ ಬುಕ್ಗಳಾಗಲಿ ಚೂರೂ ಸಹ ಒದ್ದೆಯಾಗಿರಲಿಲ್ಲ ಎಂದು ಸಮೀರ್ ತಿಳಿಸಿದ್ದಾರೆ. ಸಿಐಡಿ ತನಿಖೆಯಲ್ಲೂ ಸಹ ಅದೇ ಅಂಶವಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸೌಜನ್ಯ ಶವ ಸಿಕ್ಕ ಜಾಗದಲ್ಲಿ ಒಳಉಡುಪು ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸು ಸೌಜನ್ಯ ಮನೆಗೆ ತೆರಳಿ ಆಕೆಯ ಒಳಉಡುಪನ್ನು ತೆಗೆದುಕೊಂಡು ಬಂದಿದ್ದರು ಹಾಗೂ ಅದನ್ನೇ ಸ್ಥಳದಲ್ಲಿ ಸಿಕ್ಕಿದ ಒಳಉಡುಪು ಎಂದು ತನಿಖೆಯಲ್ಲಿ ಬರೆದುಕೊಂಡರು ಎಂದರು.
ಇದಕ್ಕೆ ಸಾಕ್ಷಿ ಎಂಬಂತೆ ಸೌಜನ್ಯ ತಾಯಿ ಮಾತನಾಡಿರುವ ವಿಡಿಯೊವನ್ನೂ ಸಹ ಸಮೀರ್ ಹಂಚಿಕೊಂಡಿದ್ದಾರೆ. ಈ ಕ್ಲಿಪ್ನಲ್ಲಿ ಸೌಜನ್ಯ ತಾಯಿ ಪೊಲೀಸರು ಬಂದು ಸೌಜನ್ಯ ಒಳಉಡುಪನ್ನು ಕೇಳಿದರು, ನಾವು ಗುರುತಿಗೆ ಎಂದು ಬಿಳಿಬಣ್ಣದ ಹೊಲಿಗೆ ಹಾಕಿಕೊಟ್ಟೆವು, ಪೊಲೀಸರು ಅದನ್ನೇ ಸ್ಥಳದಲ್ಲಿ ಸಿಕ್ಕಿದ್ದು ಎಂದು ಪ್ರಕರಣದಲ್ಲಿ ಉಲ್ಲೇಖಿಸಿದರು ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


