ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ಆರಂಭವಾದ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ನಗರದ ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿ ನಡೆದಿದೆ. ವಿಚ್ಛೇದನ ವಿಚಾರಣೆ ಮುಗಿಸಿ ಕೋರ್ಟ್ನಿಂದ ಬರುತ್ತಿದ್ದ ಪತ್ನಿಯನ್ನೇ ಪತಿ ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಮೂಲತಃ ತಮಿಳುನಾಡಿನ ಸೇಲಂನವರಾದ ಬಾಲಮುರುಗನ್ ಮತ್ತು ಭುವನೇಶ್ವರಿ 2011ರಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಾಲಮುರುಗನ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ನಿವೃತ್ತನಾಗಿದ್ದಾನೆ, ಭುವನೇಶ್ವರಿ ಅವರು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಸುಗಮವಾಗಿದ್ದ ಇವರ ಸಂಸಾರದಲ್ಲಿ ನಂತರ ಪತ್ನಿಯ ನಡತೆಯ ಮೇಲೆ ಪತಿ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದರಿಂದ ಕಿಚ್ಚು ಹೊತ್ತಿಕೊಂಡಿತ್ತು. ಈ ಸಂಬಂಧ ದಂಪತಿಗಳ ನಡುವೆ ನಿರಂತರವಾಗಿ ಗಲಾಟೆಗಳು ನಡೆಯುತ್ತಿದ್ದವು.
ವಿಚ್ಛೇದನದ ಹಂತ ಮತ್ತು ಹತ್ಯೆ:
ಪತಿಯ ಕಿರುಕುಳ ಹಾಗೂ ಅನುಮಾನದಿಂದ ಬೇಸತ್ತ ಭುವನೇಶ್ವರಿ, ಅಂತಿಮವಾಗಿ ವಿಚ್ಛೇದನ ನೀಡುವಂತೆ ಕೋರಿದ್ದರು. ಆದರೆ ಬಾಲಮುರುಗನ್ ಇದಕ್ಕೆ ಒಪ್ಪಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ, 2024ರಲ್ಲಿ ಭುವನೇಶ್ವರಿ ಅವರು ಪತಿಯಿಂದ ದೂರವಾಗಿ ಕೆಪಿ ಅಗ್ರಹಾರದಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಅಲ್ಲದೆ, ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ನೋಟಿಸ್ ಮೇರೆಗೆ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಕೋರ್ಟ್ನಿಂದ ಹೊರಬರುತ್ತಿದ್ದಾಗ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಆಕ್ರೋಶಗೊಂಡ ಮುರುಗನ್ ನಡುರಸ್ತೆಯಲ್ಲೇ ಗನ್ ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ. ಗುಂಡೇಟಿನಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭುವನೇಶ್ವರಿ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ,
ಕೃತ್ಯ ಎಸಗಿದ ಬಳಿಕ ಬಾಲಮುರುಗನ್ ತಾನೇ ನೇರವಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಅಕ್ರಮವಾಗಿ ಪಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನವಿದ್ದ ಕಾರಣ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ 5 ಸುತ್ತು ಗುಂಡು ಹಾರಿಸಿದ್ದಾನೆ. ಪಿಸ್ತೂಲ್ ಪರವಾನಗಿ ಹೊಂದಿದೆಯೇ ಅಥವಾ ಅಕ್ರಮವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಲ್ಲಿ `877’ ಅರೆ ವೈದ್ಯಕೀಯ ಹುದ್ದೆಗಳ ನೇರ ನೇಮಕಾತಿಗೆ ಸಿಕ್ತು ಸರ್ಕಾರದ ಗ್ರೀನ್ ಸಿಗ್ನಲ್.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


