ಅನಾರೋಗ್ಯಕ್ಕೆ ಒಳಗಾಗಿದ್ದ ಶಿವರಾಜ್ಕುಮಾರ್ ಅವರಿಗೆ ನಿನ್ನೆ (ಡಿಸೆಂಬರ್ 24) ಅಮೆರಿಕಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ. ಮೊದಲಿಗೆ ಕೇವಲ ಅನಾರೋಗ್ಯ ಎಂದಷ್ಟೇ ಹೇಳಿಕೊಂಡಿದ್ದ ಶಿವಣ್ಣ ಶಸ್ತ್ರಚಿಕಿತ್ಸೆಗೂ ಒಳಗಾಗುವ ಮುನ್ನ ತಮಗೆ ಕ್ಯಾನ್ಸರ್ ಇರುವುದನ್ನು ರಿವೀಲ್ ಮಾಡಿದ್ದರು.
ಶಿವಣ್ಣ ಅವರಿಗೆ ಕ್ಯಾನ್ಸರ್ ಇರುವುದರಿಂದ ತೀವ್ರ ಬೇಸರಕ್ಕೊಳಗಿದ್ದ ಅಭಿಮಾನಿಗಳು ಶಿವಣ್ಣ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಆರು ಗಂಟೆಗಳ ದೀರ್ಘಾವಧಿ ಕಾಲ ನಡೆದ ಈ ಆಪರೇಷನ್ ಯಶಸ್ವಿಯಾಗಿದ್ದು, ಅಭಿಮಾನಿಗಳ ಹಾರೈಕೆ, ಪ್ರಾರ್ಥನೆ ಫಲಿಸಿದಂತಿದೆ.
ಇನ್ನು ಶಿವಣ್ಣ ಅವರಿಗೆ ಮೂತ್ರಪಿಂಡ ಕ್ಯಾನ್ಸರ್ ಇತ್ತು, ಕ್ಯಾನ್ಸರ್ ತಗುಲಿದ್ದ ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಕರುಳನ್ನು ಬಳಸಿ ಕೃತಕ ಮೂತ್ರಪಿಂಡವನ್ನು ಅಳವಡಿಸಲಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಶಿವಣ್ಣ ಆರೋಗ್ಯದ ಕುರಿತು ಗೀತಾ ಶಿವರಾಜ್ಕುಮಾರ್ ಮಾಹಿತಿ:
ಡಾ. ಶಿವರಾಜ್ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುಸಂವಾದವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ.
ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಡಾ. ಶಿವರಾಜ್ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಸುಗಮ ಚೇತರಿಕೆಯನ್ನು ಖಚಿತಪಡಿಸಲು ಅವರು ಪ್ರಸ್ತುತ ತೀವ್ರ ನಿರೀಕ್ಷಣೆಯಲ್ಲಿದ್ದಾರೆ ಮತ್ತು ಪರಿಣತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ತಂಡದಿಂದ ಅತ್ಯುತ್ತಮ ಆರೈಕೆ ಮತ್ತು ಗಮನವನ್ನು ಪಡೆಯುತ್ತಿದ್ದಾರೆ.
ಡಾ. ಶಿವರಾಜ್ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ.
ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು.
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


