ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಡಿಕೆ ಶಿವಕುಮಾರ್ ಬೆಂಗಳೂರು ನಗರ ಅಭಿವೃದ್ಧಿಗೆಂದು ಹಲವಾರು ಯೋಜನೆಗಳನ್ನು ಘೋಷಿಸಿದ್ದು, ಅವುಗಳಲ್ಲಿ ಪ್ರಮುಖವಾದದ್ದು ಸುರಂಗ ಮಾರ್ಗದ ರಸ್ತೆ. ಈ ವಿಷಯದ ಕುರಿತಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದರು.
ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ತೇಜಸ್ವಿ ಸೂರ್ಯನಿಂದ ಬೆಂಗಳೂರಿಗೆ ಹತ್ತು ರೂಪಾಯಿ ಸಹ ಅನುದಾನ ಬಂದಿಲ್ಲ, ಆತ ಖಾಲಿ ಟ್ರಂಕ್ ಎಂದು ಟೀಕಿಸಿದ್ದರು. ಇದಕ್ಕೆ ತೇಜಸ್ವಿ ಸೂರ್ಯ ಸಹ ವಾಗ್ದಾಳಿ ನಡೆಸಿದ್ದರು.
ಹೀಗೆ ಪರಸ್ಪರ ಕಿಡಿಕಾರಿದ್ದ ಈ ಇಬ್ಬರೂ ಇಂದು ( ಅಕ್ಟೋಬರ್ 28 ) ಬೆಳ್ಳಂಬೆಳಗ್ಗೆ ಭೇಟಿಯಾಗಿದ್ದರು. ತೇಜಸ್ವಿ ಸೂರ್ಯ ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದಿಳಿದಿದ್ದರು. ಇನ್ನು ತೇಜಸ್ವಿ ಸೂರ್ಯ ಡಿಕೆ ಮನೆಗೆ ದಿಢೀರ್ ಭೇಟಿ ನೀಡಿದ್ದೇಕೆ ಎಂಬ ಚರ್ಚೆಗಳೂ ಸಹ ನಡೆದಿದ್ದವು.
ಈ ಕುರಿತು ಭೇಟಿ ಬಳಿಕ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಬೆಂಗಳೂರಿನ ಹಲವು ಯೋಜನೆಗಳ ಕುರಿತು ಚರ್ಚಿಸುವ ಸಲುವಾಗಿ ಡಿಕೆ ಅವರನ್ನು ಭೇಟಿಯಾದೆ ಎಂದಿದ್ದರು. ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿ ಕೆಲವು ಸಲಹೆಗಳನ್ನು ಕೊಟ್ಟಿದ್ದೇನೆ ಎಂದು ತಿಳಿಸಿದರು.
ಅದರಲ್ಲೂ ಮುಖ್ಯವಾಗಿ ಸುರಂಗ ಮಾರ್ಗದ ಕುರಿತು ಚರ್ಚಿಸಿ ಈ ಸುರಂಗ ಮಾರ್ಗದಲ್ಲಿ 18 ಕಿಲೊಮೀಟರ್ ರಸ್ತೆ ಮಾಡುವುದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿರುವ ಟ್ರಾಫಿಕ್ ಕಡಿಮೆಯಾಗಬೇಕೆಂದರೆ ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆ ಕಡಿಮೆಯಾಗಬೇಕು, ಸುಮಾರು 70% ಜನತೆ ಸಾರ್ವಜನಿಕ ಸಾರಿಗೆಯನ್ನು ಬಳಸುವಂತಾಗಬೇಕು, ಬೆಂಗಳೂರಿಗೆ 300 ಕಿಲೋಮೀಟರ್ನ ಮೆಟ್ರೊ ಮಾಡಿಕೊಡಬೇಕು, 3 ನಿಮಿಷಕ್ಕೊಂದು ಮೆಟ್ರೊ ಓಡಿಸಬೇಕು, ಜನ ಇರುವ ಕಡೆಯಿಂದ ನಡೆದುಕೊಂಡು ಹೋದರೆ ಐದು ನಿಮಿಷದಲ್ಲಿ ಮೆಟ್ರೊ ಸ್ಟೇಷನ್ ಸಿಗುವಂತಾಗಬೇಕು, ಅದರ ಜತೆಗೆ 300 ಕಿಲೋಮೀಟರ್ಗಳ ಸಬರ್ಬನ್ ರೈಲು ಬೇಕು, ಹೀಗಿದ್ದಾಗ 600 ಕಿ.ಮೀ ಬೆಂಗಳೂರು ಕವರ್ ಆದಂತಾಗಲಿದೆ ಎಂದು ಹೇಳಿದ್ದೇನೆ ಎಂದರು.
ಅಲ್ಲದೇ ಬೆಂಗಳೂರಿನ ಔಟರ್ ರಿಂಗ್ರೋಡ್ನ ಒಂದು ಕಡೆಗೆ ಕೆಆರ್ಪುರಂ ಮೆಟ್ರೊ ನಿಲ್ದಾಣವಿದೆ, ಇನ್ನೊಂದೆಡೆಗೆ ಸಿಲ್ಕ್ಬೋರ್ಡ್ ನಿಲ್ದಾಣವಿದೆ ಈ ಎರಡೂ ನಿಲ್ದಾಣಗಳಿಗೂ ಲಿಂಕ್ ಆಗುವಂತೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಚರ್ಚಿಸಲಾಯಿತು ಎಂದು ಹೇಳಿದರು. ಇನ್ನು ಸುರಂಗ ಮಾರ್ಗದಲ್ಲಿ ಒಂದು ಗಂಟೆಗೆ ಒಂದೆಡೆಯಿಂದ ಇನ್ನೊಂದೆಡೆಗೆ 1800 ವಾಹನಗಳು ಸಾಗಬಹುದು, ಅದೇ ದುಡ್ಡಿನಲ್ಲಿ ಮೆಟ್ರೊ ಮಾಡಿದರೆ ಒಂದು ಗಂಟೆಗೆ 69000 ಜನರು ಸಾಗಬಹುದು ಎಂಬುದನ್ನೂ ತಿಳಿಸಿದ್ದೇನೆ ಎಂದರು.
ನನ್ನ ಅರ್ಹತೆ ಏನಿದ್ದರೂ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸುವುದಷ್ಟೇ ಎಂದ ಪ್ರದೀಪ್ ಈಶ್ವರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


